ADVERTISEMENT

ಉ.ಪ್ರ ಸರ್ಕಾರ ವಜಾಗೊಳಿಸಿ: ಪರಿಶಿಷ್ಟರಿಗೆ ರಕ್ಷಣೆ ನೀಡಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 1:47 IST
Last Updated 6 ಅಕ್ಟೋಬರ್ 2020, 1:47 IST
ಕೆ.ಆರ್.ನಗರ ಮಿನಿ ವಿಧಾನಸೌಧ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಪ್ರತಿಭಟನೆ ಮಾಡಲಾಯಿತು
ಕೆ.ಆರ್.ನಗರ ಮಿನಿ ವಿಧಾನಸೌಧ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಪ್ರತಿಭಟನೆ ಮಾಡಲಾಯಿತು   

ಕೆ.ಆರ್.ನಗರ: ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ರಾಷ್ಟ್ರಪತಿ ಅವರನ್ನು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಸಂಚಾಲಕ ಸಿ.ಎಸ್.ಮೂರ್ತಿ ಒತ್ತಾಯಿಸಿದರು.

ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಈಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಇಲ್ಲಿನ ಮಿನಿ ವಿಧಾನಸೌಧ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ವತಿಯಿಂದ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದಲ್ಲಿ ಪರಿಶಿಷ್ಟರ ಮೇಲೆ ದಬ್ಬಾಳಿಕೆ, ಕೊಲೆ, ಮಹಿಳೆಯರ ಮೇಲೆ ಅತ್ಯಾಚಾರದಂತಹ ಪ್ರಕರಣಗಳು ಸಾಮಾನ್ಯವಾಗಿವೆ. ಮುಖ್ಯಮಂತ್ರಿ ಅವರು ಮೇಲು ವರ್ಗದವರ ಬೆನ್ನೆಲುಬಾಗಿ ನಿಂತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇದರಿಂದ ಉತ್ತರ ಪ್ರದೇಶದಲ್ಲಿ ಪರಿಶಿಷ್ಟ ಮಹಿಳೆಯರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ’ ಎಂದು ಆರೋಪಿಸಿದರು.

ADVERTISEMENT

ಉತ್ತರ ಪ್ರದೇಶದ ಹಾಥರಸ್‌ ಘಟನೆ ಬೆನ್ನಲ್ಲೇ ಬಲರಾಮಪುರ ಜಿಲ್ಲೆಯಲ್ಲೂ ಮತ್ತೊಂದು ಘಟನೆ ನಡೆದಿದೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಅವರ ಸಾವಿಗೆ ಕಾರಣರಾಗಿರುವ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ ಅವರು, ಅತ್ಯಾಚಾರ ಪ್ರಕರಣಗಳು ತಡೆಯಲು ಸಾಧ್ಯವಾಗದ ಯೋಗಿ ಆದಿತ್ಯನಾಥ ಬಿಜೆಪಿ ಸರ್ಕಾರ ಕೂಡಲೇ ವಜಾಗೊಳಿಸಿ ಪರಿಶಿಷ್ಟರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಉತ್ತರ ಪ್ರದೇಶ ಸರ್ಕಾರ ವಜಾ ಮಾಡಿ, ಪರಿಶಿಷ್ಟರಿಗೆ ರಕ್ಷೇನ ನೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಸಂಪತ್‌ಕುಮಾರ್, ನೇತ್ರಾವತಿ, ಶಾಂತಿರಾಜ್, ಸಮಿತಿಯ ಸಂಚಾಲಕರಾದ ಚಿಬುಕಹಳ್ಳಿ ಸಿ.ಜೆ.ಬಲರಾಮ್, ಎಲೆಮುದ್ದನಹಳ್ಳಿ ಪ್ರಭಾಕರ್, ಶೀಗವಾಳು ಸುಧಾಕರ್, ಮಾರಗೌಡನಹಳ್ಳಿ ರಾಜು, ಕುಪ್ಪಹಳ್ಳಿ ಪುರುಷೋತ್ತಮ, ಹಾಡ್ಯ ಹರೀಶ್, ಮಿರ್ಲೆ ಶಂಕರ್, ನಗರ ಘಟಕದ ಸಂಚಾಲಕ ಮುರುಗೇಶ್, ಸದಸ್ಯರಾದ ಎಲೆಮುದ್ದನಹಳ್ಳಿ ಮಹೇಶ್, ಎಂ.ಸುರೇಶ್, ಹೆಬ್ಬಾಳು ಶಿವಕುಮಾರ್, ಕಂಠೇನಹಳ್ಳಿ ಶಿವರಾಜು, ಪಶುಪತಿ ಸೋಮಶೇಖರ್, ಕಗ್ಗೆರೆ ಮಹದೇವ್, ಮಾರಗೌಡನಹಳ್ಳಿ ದಿಲೀಪ್ ಸೇರಿದಂತೆ ಇತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.