ADVERTISEMENT

ಶಾಸಕ ಮಂಜುನಾಥ್‌ಗೆ ತಿರುಗೇಟು ನೀಡಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 5:20 IST
Last Updated 26 ನವೆಂಬರ್ 2020, 5:20 IST

ಮೈಸೂರು: ಕೆಡಿಪಿ ಸಭೆಯಲ್ಲಿ ನೀಡಿದ ಹೇಳಿಕೆಯು ಶೋಭೆ ತರುವಂತದ್ದು ಅಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶಾಸಕ ಎಚ್.ಪಿ.ಮಂಜುನಾಥ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಂಜುನಾಥ್ ಅವರಿಗೆ ಪತ್ರ ಬರೆದಿರುವ ರೋಹಿಣಿ ಸಿಂಧೂರಿ, ‘ಸಭೆಯಲ್ಲಿ ನೀಡಿದ ಹೇಳಿಕೆಯು ವಾಸ್ತವಾಂಶದಿಂದ ಕೂಡಿರದ ಹಾಗೂ ಮಾಹಿತಿ ಪಡೆದುಕೊಳ್ಳದೇ ನೀಡಿದ ಹೇಳಿಕೆಗಳಾಗಿವೆ. ಇನ್ನು ಮುಂದೆ ಹೇಳಿಕೆಗಳನ್ನು ನೀಡುವಾಗ ವಾಸ್ತವಾಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಹೇಳಿದ್ದಾರೆ.

ದಸರಾ ಉನ್ನತ ಮಟ್ಟದ ಸಮಿತಿ ಸೂಚಿಸಿದಂತೆ ಗಜಪಯಣವನ್ನು ಜನಪ್ರತಿನಿಧಿಗಳಿಗೆ ಆಹ್ವಾನ ನೀಡದೇ ಅಧಿಕಾರಿಗಳು ಮಾತ್ರವೇ ಸರಳವಾಗಿ ನಡೆಸಿದ್ದಾರೆ. ಇದರಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ಹುಣಸೂರು ತಾಲ್ಲೂಕು ಆಸ್ಪತ್ರೆ, ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ. ಇದುವರೆಗೂ ಕ್ಷೇತ್ರದ ಅಭಿವೃದ್ಧಿ ಕುರಿತು ಯಾವುದೇ ಪತ್ರ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.‌

ADVERTISEMENT

ಕೇರ್ಗಳ್ಳಿ ಗ್ರಾಮದ ಹಲವು ಪ್ರದೇಶಗಳ ಭೂಪರಿವರ್ತನೆ ಕುರಿತು ನೀಡಿರುವ ಅರ್ಜಿಗಳು ಮಾತ್ರವೇ ಬಾಕಿ ಉಳಿದಿದ್ದು, ಅವುಗಳ ಕುರಿತು ಕಾನೂನಿನ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.