ಹನಗೋಡು: ಹೋಬಳಿ ವ್ಯಾಪ್ತಿಯಲ್ಲಿ ಚಿರತೆ ದಾಳಿಗೆ ಕುರಿಗಳು ನಿರಂತರವಾಗಿ ಬಲಿಯಾಗುತ್ತಿವುದರಿಂದ ಆತಂಕಕ್ಕೊಳಗಾಗಿರುವ ರೈತರಿಗೆ ಈಗ ನಾಯಿಗಳ ಕಾಟದಿಂದಾಗಿ ಇನ್ನಷ್ಟು ಆತಂಕಕ್ಕೊಳಗಾಗಿದ್ದಾರೆ.
ಹೋಬಳಿಯ ಕಣಗಾಲು ಗ್ರಾಮದಲ್ಲಿ ಮಂಗಳವಾರ ಬೀದಿನಾಯಿಗಳ ದಾಳಿಗೆ ಗ್ರಾಮದ ಕೆ.ಪಿ.ನಾಗೇಗೌಡ ಅವರಿಗೆ ಸೇರಿದ 10 ಕುರಿಗಳು ಬಲಿಯಾಗಿವೆ.
ನಾಗೇಗೌಡ ಅವರು ಪಕ್ಕದ ಜಮೀನಿಗೆ ಕೆಲಸಕ್ಕಾಗಿ ತೆರಳಿದ್ದ ವೇಳೆ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ಕೊಟ್ಟಿಗೆಗೆ ನುಗ್ಗಿ ಕುರಿಗಳನ್ನು ಕಚ್ಚಿ ಸಾಯಿಸಿವೆ. ಸುಮಾರು ₹ 1 ಲಕ್ಷ ಮೌಲ್ಯದ ಕುರಿಗಳು ಮೃತಪಟ್ಟಿವೆ ಎಂದು ಅವರು ತಿಳಿಸಿದ್ದಾರೆ.
ಅರಸು ಕಲ್ಲಹಳ್ಳಿ ಪಶುವೈದ್ಯ ಆಸ್ಪತ್ರೆಯ ಡಾ.ಶರತ್ಕುಮಾರ್ ಕುರಿಗಳ ಶವ ಪರೀಕ್ಷೆ ನಡೆಸಿ, ಪರಿಹಾರಕ್ಕೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು.
ಇತ್ತೀಚಿಗೆ ಗ್ರಾಮದಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ರಾತ್ರಿ ಸಮಯದಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಹಸು,ಕುರಿ ಮೇಕೆಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದು ನಾಯಿಗಳನ್ನು ಗ್ರಾಮ ಪಂಚಾಯಿತಿಯವರು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.