
ನಂಜನಗೂಡು: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತದಾರರಿಗೆ ನೀಡಿದ್ದ 5 ಗ್ಯಾರಂಟಿ ಕೇವಲ 10 ತಿಂಗಳಿನಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಕೊಟ್ಟ ಮಾತಿನಿಂದ ಕಾಂಗ್ರೆಸ್ ನಡೆದಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಸುನೀಲ್ ಬೋಸ್ಗೆ ಮತ ನೀಡಿ ಜಯಶೀಲರನ್ನಾಗಿ ಮಾಡಬೇಕು’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ತಾಲ್ಲೂಕಿನ ಹೆಗ್ಗಡಹಳ್ಳಿ, ಹಗಿನವಾಳು, ಹಲ್ಲರೆ ಗ್ರಾಮಗಳಲ್ಲಿ ಸೋಮವಾರ ಚಾಮರಾಜನಗರ ಲೋಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರ ರ್ಯಾಲಿ ನಡೆಸಿ ಮತಯಾಚಿಸಿ ಅವರು ಮಾತನಾಡಿದರು.
‘ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಆರೋಗ್ಯ ಹಸ್ತ ಎಂಬ ಕಾರ್ಯಕ್ರಮದ ಮೂಲಕ ನಮ್ಮ ಕ್ಷೇತ್ರ ಸೇರಿದಂತೆ ಈಡಿ ರಾಜ್ಯದಲ್ಲಿ ಪ್ರವಾಸ ಮಾಡಿ ಆರೋಗ್ಯ, ದಿನಸಿ ಕಿಟ್ ಹಾಗೂ ಚಿಕಿತ್ಸೆಗೆ ನೆರವು ನೀಡಿದ್ದರು. ನನ್ನ ತಂದೆ ಧ್ರುವನಾರಾಯಣ ಕ್ಷೇತ್ರದಾದ್ಯಂತ ಪ್ರವಾಸ ಮಾಡಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದರು’ ಎಂದು ತಿಳಿಸಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕಳೆದ 5 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹುರ ಮತ್ತು 28 ಕೆರೆಗಳನ್ನು ತುಂಬಿಸುವ ಯೋಜನೆ ಕೆಲವು ತಿಂಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ಗೆ ಹೆಚ್ಚಿನ ಮತ ನೀಡಿ ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು’ ಎಂದು ಮನವಿ ಮಾಡಿದರು.
ಮುಖಂಡರಾದ ಕಳಲೆ ಕೇಶವಮೂರ್ತಿ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಶ್ರೀಕಂಠ ನಾಯಕ, ಕೆ.ಬಿ.ಸ್ವಾಮಿ, ಕೆ.ಮಾರುತಿ, ಚೋಳರಾಜು, ಲತಾ ಸಿದ್ದಶೆಟ್ಟಿ, ಚಾಮರಾಜು, ಇಂದನ್ ಬಾಬು, ದೇವನೂರು ಮಹಾದೇವಪ್ಪ, ಪಿ.ರವಿಪ್ರಕಾಶ್, ಮಲ್ಕುಂಡಿ ಪುಟ್ಟಸ್ವಾಮಿ, ಜಯಮಾಲಾ ಬೀರೇಗೌಡ, ಮಡಕೆ ಹುಂಡಿ ಶಿವಣ್ಣ, ವಳಗೆರೆ ರಮೇಶ್, ಆನಂದ, ಕೆಂಡಗಣ್ಣಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್, ಅಂಕನಾಯಕ ಎಚ್.ಎಂ, ಶ್ರೀಕಂಠ ಸ್ವಾಮಿ, ಎಚ್.ಎಂ.ಶಿವಣ್ಣ, ನಾಗರಾಜಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.