ADVERTISEMENT

ಹಂಪಾಪುರಕ್ಕೆ ಬಂದ ಒಂಟಿ ಸಲಗ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 10:55 IST
Last Updated 2 ನವೆಂಬರ್ 2019, 10:55 IST

ಹಂಪಾಪುರ: ಗ್ರಾಮಕ್ಕೆ ಶುಕ್ರವಾರ ಒಂಟಿ ಸಲಗವೊಂದು ನುಗ್ಗಿದ್ದು, ಆತಂಕ ಮೂಡಿಸಿದೆ.

ಒಟ್ಟು ಮೂರು ಆನೆಗಳು ಹೆಡಿಯಾಲ ಅರಣ್ಯದಿಂದ ಚಿಕ್ಕದೇವಮ್ಮನ ಬೆಟ್ಟದಿಂದ ಇಲ್ಲಿಗೆ ಬಂದಿದ್ದು, ಇಲ್ಲಿನ ಬಾಲಕಿಯರ ಮೆಟ್ರಿಕ್ ಪೂರ್ವ ವಸತಿ ನಿಲಯದ ಪಕ್ಕದಲ್ಲಿ ವಾಯುವಿಹಾರಿಗಳ ಗಮನಕ್ಕೆ ಬಂದಿದೆ. ನಂತರ, ಎರಡು ಆನೆಗಳು ಮೈಸೂರಿಗೆ 28 ಕಿ.ಮೀ ದೂರದಲ್ಲಿರುವ ಮಹೇಶ್ವರಬೆಟ್ಟದಲ್ಲಿ ಬೀಡುಬಿಟ್ಟಿವೆ. ಆದರೆ, ಒಂದು ಆನೆ ಹಿಂಡಿನಿಂದ ಬೇರ್ಪಟ್ಟು ಸುತ್ತಮುತ್ತಲ ಜಮೀನುಗಳಿಗೆ ನುಗ್ಗಿ ದಾಂದಲೆ ನಡೆಸಿದೆ. ಬಾಳೆ ಮತ್ತು ತೊಗರಿಯನ್ನು ಸಾಕಷ್ಟು ಪ್ರಮಾಣದಲ್ಲಿ ಇದು ತಿಂದು ಹಾಕಿದೆ.

ಸಮೀಪದ ದಾಸನಕಟ್ಟೆ ಕೆರೆಯಲ್ಲಿ ಆನೆಯು ನೀರಾಟವಾಡುವುದನ್ನು ನೂರಾರು ಮಂದಿ ಮುಗಿಬಿದ್ದು ವೀಕ್ಷಿಸಿದರು. ಆನೆಯು ಈಜಾಡುತ್ತಾ ಹಲವು ಗಂಟೆಗಳ ಕಾಲ ವಿಶ್ರಮಿಸಿತು. ರಾತ್ರಿಯವರೆಗೂ ಕೆರೆಯ ದಡದಲ್ಲೇ ಇತ್ತು.

ADVERTISEMENT

ಕಳೆದ ಆರು ತಿಂಗಳ ಹಿಂದೆ ಸಮೀಪದ ಮಾದಾಪುರ ಗ್ರಾಮದಲ್ಲಿ ವಿಜಯಪುರದಿಂದ ಇಲ್ಲಿಗೆ ಕೂಲಿ ಕೆಲಸಕ್ಕೆ ಎಂದು ಬಂದಿದ್ದ ವ್ಯಕ್ತಿಯೊಬ್ಬರನ್ನು ಆನೆಯೊಂದು ತುಳಿದು ಕೊಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.