ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮಕ್ಕೆ ಭಾನುವಾರ ಕಾಡಾನೆ ಬಂದಿದ್ದು, ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಶುಕ್ರವಾರ ಬೆಳಿಗ್ಗೆ ಹಂಪಾಪುರ ಹಾಗೂ ಹೊಮ್ಮರಗಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಯನ್ನು ಅದೇ ದಿನ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿ ಚಿಕ್ಕದೇವಮ್ಮನ ಬೆಟ್ಟದ ಕಾಡಿಗೆ ಓಡಿಸಿದ್ದರು.
ಹಂಪಾಪುರದಿಂದ ಆರೇಳು ಕಿಲೋಮೀಟರ್ ಅಂತರದಲ್ಲಿರುವ ಮಾದಾಪುರ ಗ್ರಾಮಕ್ಕೆ ಭಾನುವಾರ ಬೆಳಿಗ್ಗೆ ಅದೇ ಕಾಡಾನೆ ಮರಳಿ ಬಂದಿದ್ದು ಗ್ರಾಮಸ್ಥರಲ್ಲಿ ಆತಂಕ ಮಾಡಿದೆ.
ಚಂದ್ರಮೌಳೇಶ್ವರ ಬೆಟ್ಟದಲ್ಲಿ ಬೆಳಿಗ್ಗೆ ಕಾಡಾನೆ ಕಾಣಿಸಿಕೊಂಡಿದೆ. ಕಾಡಾನೆ ಗ್ರಾಮಕ್ಕೆ ಬಂದ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಆನೆಯನ್ನು ನೋಡಲು ಸಹಸ್ರಾರು ಮಂದಿ ಬೆಟ್ಟಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಕಾಡಾನೆ ಗಾಬರಿಗೊಂಡು ಮಾದಾಪುರ ಗ್ರಾಮದ ಹೂವಿನಕೆರೆ ಕೆರೆಗೆ ಬಂದಿದೆ.
ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿ ಆನೆಯನ್ನು ಸೂರ್ಯಾಸ್ತದ ಬಳಿಕ ಮತ್ತೆ ಕಾಡಿಗಟ್ಟಲು ಕಾರ್ಯಾಚರಣೆ ಆರಂಭಿಸಿದ್ದಾರೆ.
ಸಾಮಾಜಿಕ ಅರಣ್ಯ ವಲಯಾಧಿಕಾರಿ ಮಧು, ವೃತ್ತ ನಿರೀಕ್ಷಕ ಪುಟ್ಟಸ್ವಾಮಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.