ADVERTISEMENT

ಕಾಡಾನೆಗಳ ದಾಳಿ: 100 ಎಕರೆ ಮುಸುಕಿನ ಜೋಳ ನಾಶ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 2:29 IST
Last Updated 9 ಆಗಸ್ಟ್ 2020, 2:29 IST

ಹುಣಸೂರು: ತಾಲ್ಲೂಕಿನ ನಾಗಾಪುರ ಪುನರ್ವಸತಿ ಕೇಂದ್ರ, ಹೊಸಪೆಂಜಳ್ಳಿ ಮತ್ತು ಗುರುಪುರ ಗ್ರಾಮಗಳಲ್ಲಿ ಕಾಡಾನೆ ದಾಳಿಗೆ ಮುಸುಕಿನಜೋಳ ಸಂಪೂರ್ಣ ನಾಶವಾಗಿದೆ.

ನಾಗರಹೊಳೆ ವೀರನಹೊಸಹಳ್ಳಿ ವಲಯದಿಂದ 9 ಕಾಡಾನೆ ಇರುವ ಹಿಂಡು ನಾಗಾಪುರ ಪುನರ್ವಸತಿ ಕೇಂದ್ರದ ಗುರುಪುರ ಭಾಗದಲ್ಲಿ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಮುಸುಕಿನಜೋಳ ಧ್ವಂಸ ಮಾಡಿದೆ. ವಿಷಯ ತಿಳಿದ ಸ್ಥಳೀಯ ರೈತರು ಆನೆಗಳನ್ನು ಕಾಡಿಗಟ್ಟುವ ಪ್ರಯತ್ನ ನಡೆಸಿದರೂ ವಿಫಲವಾಯಿತು ಎಂದು ನಾಗಾಪುರ ಪುನರ್ವಸತಿ ಕೇಂದ್ರದ ನಿವಾಸಿ ಜೆ.ಕೆ.ಮಣಿ ತಿಳಿಸಿದ್ದಾರೆ.

ನಷ್ಟ: ಆನೆ ದಾಳಿಯಿಂದ ಹೊಸಪೆಂಜಳ್ಳಿ ರೈತ ನಾಗೇಗೌಡ, ನಲ್ಲೂರು ಪಾಲ ಗ್ರಾಮದ ಕೆಂಪಣ್ಣ, ನಾಗಾಪುರ ಪುನರ್ವಸತಿ ಕೇಂದ್ರದ ಕುಮಾರ, ಜಯಣ್ಣ, ಮಣಿ, ಪ್ರಭು, ಜೆ.ಕೆ ತಿಮ್ಮ ಇವರಿಗೆ ಸೇರಿದ ಫಸಲು ನಾಶವಾಗಿದೆ.

ADVERTISEMENT

ಕಾಡಾನೆ ವೀರನಹೊಸಹಳ್ಳಿ ವಲಯದ ಪಾರೆ ಎಂಬಲ್ಲಿಂದ ಟಿಬೆಟ್ ಕ್ಯಾಂಪ್‌ನವರು ನಿರ್ಮಿಸಿರುವ ತಡೆಗೋಡೆ ದಾಟಿ ಹೊಲಕ್ಕೆ ದಾಳಿ ಇಟ್ಟಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅರಣ್ಯ ಇಲಾಖೆ ವೀರನಹೊಸಹಳ್ಳಿ ವಲಯದ ಅಧಿಕಾರಿ ರವೀಂದ್ರ ನೇತೃತ್ವ ದಲ್ಲಿ ಕಾಡಾನೆ ಅರಣ್ಯಕ್ಕೆ ಅಟ್ಟಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.