ಮೈಸೂರು: ಮನೆ ಕಟ್ಟಿಕೊಳ್ಳಲು ಸರ್ಕಾರ ನೀಡಿದ ಜಾಗವನ್ನು, ರಾಜಕೀಯ ಬಲ ಹಾಗೂ ಹಣ ಬಲ ಬಳಸಿ ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ತೆರವುಗೊಳಿಸಿ ಕೊಡಬೇಕು. ಇದರ ಜತೆಗೆ ನಮಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕುಟುಂಬವೊಂದು ಶನಿವಾರ ಪ್ರತಿಭಟನೆ ನಡೆಸಿತು.
ಮಾದನಹಳ್ಳಿಯ ಗಿರೀಶ್ ತನ್ನ ಪತ್ನಿ, ಮಕ್ಕಳೊಟ್ಟಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು.
‘ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ಮಾದನಹಳ್ಳಿ ಗ್ರಾಮದ ಸರ್ವೇ ನಂಬರ್ 12/1, 12/2, 13/1ಎರಲ್ಲಿನ 1.20 ಎಕರೆ ಜಮೀನು ಸರ್ಕಾರದ ಆಸ್ತಿ. ಇದೇ ಗ್ರಾಮದ ಪರಶಿವಮೂರ್ತಿ, ಶಿವಣ್ಣ, ಮಲ್ಲಿಕಾರ್ಜುನ, ಬಸವರಾಜು, ಮಹದೇವಪ್ಪ ಎಂಬುವವರು ಗ್ರಾಮ ಪಂಚಾಯಿತಿಯ ಹಾಲಿ ಮತ್ತು ಮಾಜಿ ಸದಸ್ಯರಾಗಿದ್ದು, ರಾಜಕೀಯ ಬಲ ಮತ್ತು ಹಣ ಬಲ ಬಳಸಿ ಬಡವರಿಗೆ ಮನೆ ಕಟ್ಟಲು ನೀಡಿರುವ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ.’
‘ಈ ಸಂಬಂಧ ಒತ್ತುವರಿ ತೆರವುಗೊಳಿಸಿ ನ್ಯಾಯ ಕೊಡಿಸುವಂತೆ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ; ಇವರೆಲ್ಲರ ಮಾತಿನಂತೆ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ’ ಎಂದು ಪ್ರತಿಭಟನಾಕಾರ ಗಿರೀಶ್ ಕಿಡಿಕಾರಿದರು.
‘ಎರಡು ವರ್ಷದಿಂದ ಇದರ ವಿರುದ್ಧ ಹೋರಾಟ ಮಾಡಿಕೊಂಡು ಬಂದರೂ; ಕಡು ಬಡವರಾದ ನಮ್ಮ ಕುಟುಂಬಕ್ಕೆ ಅನ್ಯಾಯವಾಗುತ್ತಿದೆ. ಹೀಗಾಗಿ ನಾನು ಮತ್ತು ನಮ್ಮ ಕುಟುಂಬ ನಮಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡುತ್ತಿದ್ದು, ಕೂಡಲೇ ಒತ್ತುವರಿ ತೆರವುಗೊಳಿಸಿ ನಮಗೆ ನ್ಯಾಯ ಒದಗಿಸಬೇಕು’ ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.