ಮೈಸೂರು: ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಅಂತಿಮ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ (ಥ್ಯಾಂಕ್ಯೂ ಎನ್ಎಸ್ಎಸ್) ಆಯೋಜಿಸಲಾಗಿತ್ತು.
ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ.ರಮೇಶ್ ಬಾಬು ಮಾತನಾಡಿ, ‘ಘಟಕದ ಸ್ವಯಂಸೇವಕಿಯರು ಸತತವಾಗಿ 6 ವರ್ಷ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಕವಾಯತು ಹಾಗೂ ಈ ಬಾರಿ ರಾಷ್ಟ್ರ ಮಟ್ಟದ ಗಣರಾಜ್ಯೋತ್ಸವ ಕವಾಯತಿನಲ್ಲಿ ಭಾಗವಹಿಸಿ ನಮ್ಮ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಸತತ 4 ವರ್ಷಗಳಿಂದ ಮೈಸೂರು ವಿಶ್ವವಿದ್ಯಾಲಯದ ‘ಅತ್ಯುತ್ತಮ ಸ್ವಯಂಸೇವಕಿ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅನೇಕ ವಿದ್ಯಾರ್ಥಿನಿಯರು ಎನ್ಎಸ್ಎಸ್ ಕೋಟಾದಲ್ಲಿ ಮೈಸೂರು ವಿ.ವಿಯಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.
‘ಮೈಸೂರು ವಿ.ವಿಯು ನ್ಯಾಕ್ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾಲೇಜಿನ 80 ಸ್ವಯಂಸೇವಕಿಯರು ಭಾಗವಹಿಸಿದ್ದರು’ ಎಂದು ಕನ್ನಡ ವಿಭಾಗದ ಸಹ ಪ್ರಧ್ಯಾಪಕರಾದ ಡಾ.ಕೆಂಡಗಣ್ಣೇಗೌಡ ಹೇಳಿದರು.
ಐಕ್ಯೂಎಸಿ ಸಂಯೋಜಕ ಡಾ.ತಿಪ್ಪೇಸ್ವಾಮಿ ಮತ್ತು ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಡಿ.ರವಿ ಮಾತನಾಡಿದರು.
ಸ್ವಯಂಸೇವಕಿಯರು ಸೇರಿ ಎನ್ಎಸ್ಎಸ್ ಕೊಠಡಿಗೆ ಸ್ಟ್ಯಾಂಡಿಂಗ್ ಫ್ಯಾನ್ ಅನ್ನು ಉಡುಗೊರೆಯಾಗಿ ನೀಡಿದರು.
ಶಾಲಿನಿ ಪಿ. ಮತ್ತು ಮೋನಿಕಾ ಜಿ.ಆರ್. ನಿರೂಪಿಸಿದರು. ಚೈತ್ರಾ ಎನ್. ನಿರೂಪಿಸಿದರು. ಕೀರ್ತನಾ ಎಂ.ಡಿ.ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.