
ಪಿರಿಯಾಪಟ್ಟಣ ತಾಲ್ಲೂಕಿನ ಮಾಕೋಡು ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಮತ್ತು ಬಿಎಂಸಿ ಕೇಂದ್ರವನ್ನು ಸಚಿವ ಕೆ.ವೆಂಕಟೇಶ್ ಉದ್ಘಾಟಿಸಿ ಮಾತನಾಡಿ ದರು.
ಪಿರಿಯಾಪಟ್ಟಣ: ‘ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರಾಜಕೀಯ ಬೆರೆಸದೆ ರೈತರ ಏಳಿಗೆಗೆ ಸಹಕರಿಸಿ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಮಾಕೋಡು ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಮತ್ತು ಬಿಎಂಸಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಮಾಕೋಡು ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮವಾಗಿದ್ದು, ಬಹುತೇಕ ರೈತರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಹೆಚ್ಚು ಹಾಲು ಸಂಗ್ರಹವಾಗುತ್ತಿರುವುದರಿಂದ ಬಿಎಂಸಿ ಕೇಂದ್ರವನ್ನು ನಿರ್ಮಿಸಲಾಗಿದೆ ಎಂದರು.
ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಿ ಮೊದಲು ₹ 3 ಹೆಚ್ಚಿಸಿ ನಂತರ ₹ 4 ಹೆಚ್ಚಳ ಮಾಡಲಾಗಿದೆ. ಎರಡು ಬಾರಿ ಹಾಲಿನ ದರವನ್ನು ಹೆಚ್ಚು ಮಾಡಿದ್ದು, ಒಟ್ಟು ₹ 7 ಹಾಗೂ ₹ 5 ಸಬ್ಸಿಡಿಯಾಗಿ ರೈತರ ಖಾತೆಗೆ ಜಮವಾಗುತ್ತಿದೆ ಎಂದರು.
ತಹಶೀಲ್ದಾರ್ ನಿಸರ್ಗಪ್ರಿಯ, ತಾಲ್ಲೂಕು ಪ.ಇಒ ಸುನೀಲ್ ಕುಮಾರ್, ಮೈಮುಲ್ ನಿರ್ದೇಶಕ ಪ್ರಕಾಶ್, ಜಿಲ್ಲಾ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಹಮತ್ ಜಾನ್ ಬಾಬು ಮತ್ತು ಡಿ. ಟಿ. ಸ್ವಾಮಿ ಪಂಚಾಯಿತಿ ಅಧ್ಯಕ್ಷೆ ಶೈಲಜಾ, ಡೇರಿ ಅಧ್ಯಕ್ಷೆ ಜಯಮ್ಮ, ಮೈಮುಲ್ ವ್ಯವಸ್ಥಾಪಕ ಕರಿಬಸವಯ್ಯ, ವಿಸ್ತರಣಾಧಿಕಾರಿಗಳಾದ ನಿಶ್ಚಿತ್, ಅವಿನಾಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೆ.ಹೊಲದಪ್ಪ , ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.
‘ಮೊಸರಲ್ಲಿ ಕಲ್ಲು ಹುಡುಕುವ ಪ್ರತಿಪಕ್ಷ’
'ರೈತರಿಗಾಗಿ ಹಾಲಿನ ದರ ಏರಿಸಿದರೆ ಗ್ರಾಹಕರಿಗೆ ಅನನುಕೂಲ ಮಾಡುತ್ತಿದ್ದಾರೆ ಗ್ಯಾರಂಟಿ ಯೋಜನೆ ಹೊರಡಿಸಿ ಸರ್ಕಾರವನ್ನು ನಷ್ಟದಲ್ಲಿ ತಳ್ಳಿದ್ದಾರೆ ಧರ್ಮಸ್ಥಳ ವಿವಾದಕ್ಕೆ ಎಸ್ಐಟಿ ರಚನೆ ಮಾಡಿ ಪರಿಶೀಲನೆಗೆ ಅನುಮತಿ ನೀಡಿ ದೇಗುಲಕ್ಕೆ ಕಳಂಕ ತಂದಿದ್ದಾರೆ ಎಂದು ಅಪಪ್ರಚಾರದ ದ್ವನಿ ಎತ್ತಿಸಿ ನಮ್ಮ ಸರ್ಕಾರದ ವಿರುದ್ಧ ಬಿಜೆಪಿ ಜೆಡಿಎಸ್ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆಲ್ಲ ಜನರು ಕಿವಿಗೊಡದಿರಿ’ ಎಂದು ಸಚಿವ ವೆಂಕಟೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.