ಎಚ್.ಕೆ. ಪಾಟೀಲ
ಮೈಸೂರು: ‘ಕೃಷಿ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿಪಡಿಸುವಂತಹ ವ್ಯವಸ್ಥೆ ಬರಬೇಕು’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಆಶಿಸಿದರು.
ಇಲ್ಲಿನ ಬನ್ನೂರು ರಸ್ತೆಯಲ್ಲಿರುವ ವಿದ್ಯಾವಿಕಾಸ ಕಾನೂನು ಅಧ್ಯಯನ ಸಂಸ್ಥೆ (ವಿವಿಐಎಲ್ಎಸ್)ಯಲ್ಲಿ ವಿದ್ಯಾವಿಕಾಸ ಶಿಕ್ಷಣ ಟ್ರಸ್ಟ್ ಹಾಗೂ ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕೃಷಿ ಉತ್ಪನ್ನ ಮಾರುಕಟ್ಟೆ ಕಾನೂನು’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ಬೇರೆಲ್ಲರೂ ಅವರವರ ಉತ್ಪನ್ನಕ್ಕೆ ಬೆಲೆ ನಿಗದಿಪಡಿಸಬಹುದು. ಆದರೆ, ರೈತರು ಮಾಡಬಾರದೇಕೆ? ಶೂ, ಆಟಿಕೆ, ಪಾನ್ ಮಸಾಲ ಮಾರುವವರೂ ಬೆಲೆ ನಿಗದಿಪಡಿಸುತ್ತಾರೆ. ಕಡಿಮೆ ಕೊಡುವಂತಿಲ್ಲ. ಆದರೆ, ನಮ್ಮ ರೈತರು ಬೆಲೆ ಹೇಳುವಷ್ಟು ಮಾರುಕಟ್ಟೆ ಸನ್ನಿವೇಶ ಇನ್ನೂ ನಿರ್ಮಾಣವಾಗಿಲ್ಲ. ಇದು ನಮ್ಮಲ್ಲಿ ನೋವುಂಟು ಮಾಡಬೇಕು. ರೈತನೇ ಬೆಲೆ ಸೃಷ್ಟಿಸಿದಾಗ ಮಾತ್ರ ಅವರ ಕಲ್ಯಾಣ ಸಾಧ್ಯ. ಈ ನಿಟ್ಟಿನಲ್ಲಿ ನಮ್ಮೆಲ್ಲರ ನಡೆ ಇರಬೇಕು. ಆದರೆ, ನಾವೀಗ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.
ನಿರ್ಲಕ್ಷಿತ ಕ್ಷೇತ್ರ: ‘ಕೃಷಿ ಉತ್ಪನ್ನ ಮಾರುಕಟ್ಟೆ ಅತ್ಯಂತ ನಿರ್ಲಕ್ಷಿತ ಕ್ಷೇತ್ರವಾಗಿದೆ. ಇದಕ್ಕೆ ಸಂಬಂಧಿಸಿದ ಕಾನೂನುಗಳು ಸಡಿಲವಾಗಿವೆ. ಜೊತೆಗೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದರೂ ತಪ್ಪಾಗಲಾರದು’ ಎಂದರು.
‘ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಯಾವುದೇ ರೈತರಿಂದ ಕಮಿಷನ್ ತೆಗೆದುಕೊಳ್ಳಬಾರದು ಎಂದು ಕಾನೂನು ಮಾಡಲಾಗಿತ್ತು. ಆದರೆ, ಬಿಲ್ ಹಿಂದೆ ಬರೆದು ಶೇ 4ರಷ್ಟು, ವಾಣಿಜ್ಯ ಬೆಳೆಗಳಿಗೆ ಶೇ 7ರಷ್ಟು ಕಮಿಷನ್ ಪಡೆಯುವುದು ಪ್ರಾರಂಭವಾಯಿತು. ತೂಕದಲ್ಲಿ ಮೋಸ ಆಗುತ್ತಿದೆ. ಹಣ ಪಾವತಿಯಲ್ಲಿ ವಿಳಂಬ ಮಾಡಲಾಗುತ್ತದೆ. ಇದೆಲ್ಲವನ್ನೂ ತಡೆಯಲೆಂದೇ ಎಂ.ಎಸ್.ಸ್ವಾಮಿನಾಥನ್ ಅವರು ನೀಡಿದ್ದ ವರದಿಯ ಶಿಫಾರಸುಗಳು ಇಂದಿಗೂ ಜಾರಿಯಾಗಿಲ್ಲ. ಅವರ ಶಿಫಾರಸು ಅಧರಿಸಿ ಎಂಎಸ್ಪಿ ಕೊಡುತ್ತಿಲ್ಲ. ರೈತರ ಉತ್ಪನ್ನಕ್ಕೆ ಸೂಕ್ತ ಬೆಲೆ ಸಿಗಬೇಕೆಂಬ ಹೋರಾಟ ನಡೆಯುತ್ತಲೇ ಇದೆ’ ಎಂದು ಹೇಳಿದರು.
ಮರುಸ್ಥಾಪಿಸಲಾಗಿದೆ: ‘ರೈತ ವಿರೋಧಿ ಮೂರು ಕಾನೂನುಗಳನ್ನು ತಂದು, ರೈತರಿಗೆ ಇದ್ದ ಸಣ್ಣ ರಕ್ಷಣೆಯನ್ನೂ ನಾಶಪಡಿಸಲಾಯಿತು. ಅವುಗಳನ್ನು ಹಿಂಪಡೆಯುವಂತೆ ರೈತರು ದೆಹಲಿ ಸುತ್ತ ದೊಡ್ಡಮಟ್ಟದಲ್ಲಿ ಹೋರಾಡಿದ್ದು ಐತಿಹಾಸಿಕವಾದುದು. ಅದಕ್ಕೆ ಕೇಂದ್ರ ಸರ್ಕಾರ ಬಗ್ಗಿತು. ರಾಜ್ಯದಲ್ಲಿ ರೈತರಿಗೆ ಇದ್ದ ರಕ್ಷಣೆಯನ್ನು ಮರುಸ್ಥಾಪಿಸಲಾಗಿದೆ’ ಎಂದರು.
ಕೃಷಿ ಅರ್ಥಶಾಸ್ತ್ರಜ್ಞ ಪಿ.ಜಿ.ಚೆಂಗಪ್ಪ ಮಾತನಾಡಿ, ‘ಲಭ್ಯ ಗೋದಾಮುಗಳನ್ನು ರೈತರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಆಗಬೇಕು. ರಾಷ್ಟ್ರೀಯ ಮಾರುಕಟ್ಟೆ ಅಗತ್ಯವಾಗಿದ್ದು, ರೈತರು ಒಳ್ಳೆಯ ಬೆಲೆ ಪಡೆದುಕೊಳ್ಳುವಂತೆ ಆಗಬೇಕು. ಇ–ಕಾಮರ್ಸ್ ವೇದಿಕೆಗಳಿಗೆ ರೈತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡಬೇಕಾಗಿದೆ. ಎಪಿಎಂಸಿಗಳನ್ನು ಮುಂದುವರಿಸಬೇಕು. ಕೃಷಿಕರ ವಿಷಯದಲ್ಲಿ ಸರ್ಕಾರಗಳು ಫೆಸಿಲಿಟೇಟರ್ (ಅನುವುಗಾರ) ಆಗಬೇಕೇ ಹೊರತು ನಿರ್ಬಂಧಕ ಆಗಬಾರದು’ ಎಂದು ಹೇಳಿದರು.
ಪ್ರೊ.ಎಸ್.ಎಂ. ಮುಂದಿನಮನಿ ಮಾತನಾಡಿ, ‘ರೈತರು ದೇಶದ ಆರ್ಥಿಕತೆಯ ಬೆನ್ನೆಲುಬು ಎನ್ನುತ್ತಾರೆ. ಆದರೆ, ಅವರಿಗೆ ಅನುಕೂಲ ಕಲ್ಪಿಸುವ ಕೆಲಸ ಸಮರ್ಪಕವಾಗಿ ಆಗಿಲ್ಲ. ಖರೀದಿ ಕೇಂದ್ರ ತೆರೆಯಲಾಗುತ್ತದೆ; ಎಂಎಸ್ಪಿ ಘೋಷಿಸಲಾಗುತ್ತದೆ. ಆದರೆ, ಮಧ್ಯವರ್ತಿಗಳು, ವ್ಯಾಪಾರಿಗಳಿಂದ ಶೋಷಣೆ ತಪ್ಪಿಲ್ಲ. ಸಿಕ್ಕಷ್ಟಕ್ಕೇ ಮಾರಬೇಕಾದ ಸ್ಥಿತಿ ರೈತರದಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು.
‘ಕಾನೂನು ಮತ್ತು ಕಾಲಧರ್ಮ’ ಸ್ಮರಣಸಂಚಿಕೆ ಬಿಡುಗಡೆ ಮಾಡಲಾಯಿತು.
ನಿವೃತ್ತ ಕುಲಪತಿ ಪ್ರೊ.ಪಿ.ಈಶ್ವರ್ ಭಟ್ ದಿಕ್ಸೂಚಿ ಭಾಷಣ ಮಾಡಿದರು. ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕ ಪ್ರೊ.ಚಿದಾನಂದ ಎಸ್.ಪಾಟೀಲ, ಸಂಶೋಧನಾ ಮುಖ್ಯಸ್ಥ ರೇವಯ್ಯ ಒಡೆಯರ್, ವಿದ್ಯಾವಿಕಾಸ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಕವೀಶ್ಗೌಡ ವಿ., ವಿವಿಐಎಲ್ಎಸ್ ನಿರ್ದೇಶಕ ನಟರಾಜು ಎಸ್., ಪ್ರಾಂಶುಪಾಲ ಸಂಜಿತ್ ಎಂ.ಎನ್., ಸಹಾಯಕ ಪ್ರಾಧ್ಯಾಪಕರಾದ ಮಂಜುನಾಥ್ ಎಸ್.ಎಸ್. ಹಾಗೂ ರಾಜೇಶ್ವರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.