ADVERTISEMENT

ಸುಟ್ಟ ಸ್ಥಿತಿಯಲ್ಲಿ ಗರ್ಭಿಣಿ ಮೃತದೇಹ ಪತ್ತೆ

ತಿ.ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿಯ ದೊಡ್ಡಮುಲಗೂಡು ಗ್ರಾಮದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 2:28 IST
Last Updated 15 ನವೆಂಬರ್ 2020, 2:28 IST

ಮೈಸೂರು: ತಿ.ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿಯ ದೊಡ್ಡಮುಲಗೂಡು ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಅವರ ಪತ್ನಿ ಶಾಂತಮ್ಮ (23) ಮೃತದೇಹವು ಅವರ ನಿವಾಸದಲ್ಲಿ ಸುಟ್ಟು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಲೆ ಶಂಕೆ ವ್ಯಕ್ತವಾಗಿದೆ.

ಮನೆಯ ಬಾಗಿಲ ಬಳಿಯೇ ಮೃತದೇಹ ಸಿಕ್ಕಿದ್ದು, ಪತಿ ಸೇರಿದಂತೆ ಮನೆಯಲ್ಲಿದ್ದ ಇತರೆ ಸದಸ್ಯರು ಪರಾರಿಯಾಗಿದ್ದಾರೆ. ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಂಜನಗೂಡು ಅಶೋಕಪುರಂನ ಶಾಂತಮ್ಮ ಅವರು ಕಳೆದ 2 ವರ್ಷಗಳ ಹಿಂದೆಯಷ್ಟೇ ರಮೇಶ್‌ ಅವರನ್ನು ವಿವಾಹವಾಗಿದ್ದರು. ಸುಟ್ಟ ಸ್ಥಿತಿಯಲ್ಲಿ ಇವರ ಮೃತದೇಹ ಮನೆಯ ಬಾಗಿಲ ಬಳಿಯೇ ಕಾಣಿಸುತ್ತಿದ್ದಂತೆ ಗ್ರಾಮಸ್ಥರು ಸಂಜೆ 4 ಗಂಟೆ ಹೊತ್ತಿಗೆ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ತಕ್ಷಣ ಬಂದ ಪೊಲೀಸರು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದು, ಪತಿ ರಮೇಶ್ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

ADVERTISEMENT

ಡಿವೈಎಸ್‌ಪಿ ಪ್ರಭಾಕರ್‌ರಾವ್ ಶಿಂಧೆ, ಸರ್ಕಲ್‌ ಇನ್‌ಸ್ಪೆಕ್ಟರ್ ಲವ, ಬನ್ನೂರು ಠಾಣೆ ಎಎಸ್‌ಐ ರಂಗಸ್ವಾಮಿ, ನಾರಾಯಣ ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.