ADVERTISEMENT

ಮೈಸೂರಿನಲ್ಲಿ ಗೋದಾಮಿಗೆ ಬೆಂಕಿ: ₹ 2 ಲಕ್ಷ ನಷ್ಟ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 15:04 IST
Last Updated 9 ಆಗಸ್ಟ್ 2020, 15:04 IST
ಭಾಗ್ಯ ಪ್ರಾವಿಷನ್‌ ಸ್ಟೋರ್‌ನ ಗೋದಾಮಿಗೆ ಭಾನುವಾರ ಆಕಸ್ಮಿಕವಾಗಿ ಬೆಂಕಿ ತಗುಲಿದೆ
ಭಾಗ್ಯ ಪ್ರಾವಿಷನ್‌ ಸ್ಟೋರ್‌ನ ಗೋದಾಮಿಗೆ ಭಾನುವಾರ ಆಕಸ್ಮಿಕವಾಗಿ ಬೆಂಕಿ ತಗುಲಿದೆ   

ಮೈಸೂರು: ನಗರದ ದೇವರಾಜ ಮೊಹಲ್ಲಾದ ಶಿವಯ್ಯನ ಮಠದ ರಸ್ತೆಯಲ್ಲಿರುವ ಭಾಗ್ಯ ಪ್ರಾವಿಷನ್‌ ಸ್ಟೋರ್‌ನ ಗೋದಾಮಿಗೆ ಭಾನುವಾರ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಅಂದಾಜು ₹ 2 ಲಕ್ಷ ನಷ್ಟವಾಗಿದೆ ಎನ್ನಲಾಗಿದೆ.

ಭಾಗ್ಯ ಪ್ರಾವಿಷನ್ ಸ್ಟೋರ್‌ನ ಮೇಲ್ಭಾಗದಲ್ಲೇ ಗೋದಾಮು ಇತ್ತು. ಕೆಲ ದಿನಗಳ ಹಿಂದಷ್ಟೇ ಎಲ್ಲವನ್ನೂ ಖಾಲಿ ಮಾಡಿದ್ದರು.

ಬೆಂಕಿ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನದೊಂದಿಗೆ ಬಂದ ಸಿಬ್ಬಂದಿ, ಒಂದು ಗಂಟೆಗೂ ಹೆಚ್ಚಿನ ಅವಧಿ ಬೆಂಕಿ ನಂದಿಸಲು ಹರ ಸಾಹಸ ನಡೆಸಿದರು. ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿಯ ಕೆನ್ನಾಲಿಗೆ ತಗುಲದಂತೆ ನೋಡಿಕೊಂಡರು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅಂಗಡಿ, ಗೋದಾಮು ವೆಂಕಟೇಶ್‌ ಎಂಬುವರಿಗೆ ಸೇರಿದ್ದು. ಬೆಂಕಿ ಹೇಗೆ ತಗುಲಿತು ಎಂಬುದು ಗೊತ್ತಾಗಿಲ್ಲ. ಅಂಗಡಿಯಲ್ಲಿದ್ದ ₹ 50 ಸಾವಿರ ಮೌಲ್ಯದ ವಸ್ತುಗಳು ಸೇರಿದಂತೆ ಕಟ್ಟಡಕ್ಕೂ ಬೆಂಕಿ ಹಾನಿಯನ್ನುಂಟು ಮಾಡಿದೆ. ಕನಿಷ್ಠ ₹ 2 ಲಕ್ಷ ನಷ್ಟವಾಗಿದೆ ಎಂದು ಮಾಲೀಕರು ದೂರು ನೀಡಿದ್ದಾರೆ’ ಎಂದು ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ ಪ್ರಸನ್ನಕುಮಾರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.