ADVERTISEMENT

ಬೀಸು ಕಂಸಾಳೆಗೆ ಜೀವನ ಮುಡಿಪು: ಕಂಸಾಳೆ ಮಹದೇವುಗೆ ಜಾನಪದ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 5:29 IST
Last Updated 23 ಜನವರಿ 2022, 5:29 IST
ಕಂಸಾಳೆ ಮಹದೇವು
ಕಂಸಾಳೆ ಮಹದೇವು   

ನಂಜನಗೂಡು: ಬೀಸು ಕಂಸಾಳೆ ಪ್ರಕಾರದಲ್ಲಿ ಗಮನಾರ್ಹ ಸಾಧನೆ ಮಾಡಿದ ‘ಕಂಸಾಳೆ ಮಹದೇವು’ ಅವರಿಗೆ 2020–21ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಸಂದಿದೆ.

ತಾಲ್ಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮ ನಿವಾಸಿ, 73 ವರ್ಷದ ಮಹದೇವು 50 ವರ್ಷಗಳಿಂದ ಬೀಸು ಕಂಸಾಳೆ ಪ್ರದರ್ಶಿಸುತ್ತಾ ಬಂದಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಮಲೆ ಮಹದೇಶ್ವರರ ಪವಾಡಗಳನ್ನು ಹಾಡಿ ಹೊಗಳುವ, ಲಾವಣಿ, ಕಂಸಾಳೆ, ನೀಲಗಾರರ ಜನಪದ ಸಂಪ್ರದಾಯ ರೂಢಿಗತವಾಗಿದೆ. ಮಹದೇಶ್ವರ ಸ್ವಾಮಿಯನ್ನು ಮನೆ ದೇವರಾಗಿಸಿಕೊಂಡ ಕುಟುಂಬಗಳಲ್ಲಿ ಒಬ್ಬರನ್ನು ದೇವರ ಗುಡ್ಡರನ್ನಾಗಿ ಬಿಡುವ ಪದ್ಧತಿಯಿದೆ. ಈ ರೀತಿ ದೇವರ ಗುಡ್ಡರಾದ ಮಹದೇವು, ತನ್ನ 20ನೇ ವಯಸ್ಸಿನಲ್ಲಿ ರಾಯರಹುಂಡಿ ಮರೀಗೌಡರ ಶಿಷ್ಯರಾಗಿ ಬೀಸು ಕಂಸಾಳೆಯ ವರಸೆಗಳನ್ನು ಕರಗತ ಮಾಡಿಕೊಂಡವರು.

ADVERTISEMENT

ಮಹದೇಶ್ವರರನ್ನು ಕಂಸಾಳೆ ಹದಕ್ಕೆ ಒಗ್ಗಿಸಿ ‘ಇಳಿದಾರಾ ಇಳಿದಾರು ಮಾದೇವ ಗಿರಿಯಿಂದಿಳಿದಾರು ಮಾದೇವ’ ಎನ್ನುತ್ತಾ ಕಣ್ಣಿಗೆ ಕಟ್ಟುವಂತೆ ನಿರೂಪಿಸುವ ಅಪರೂಪದ ಕಲಾವಿದ. ಮಹದೇಶ್ವರರ ಚರಿತ್ರೆಯನ್ನು ಹಾಡಿ– ಕುಣಿಯುವ ಪರಿ, ನೋಡುಗರಲ್ಲಿ ಭಕ್ತಿಭಾವ ಮೂಡಿಸುತ್ತದೆ.

ಕಂಸಾಳೆ ಮಹದೇವು ಅವರು ರಾಯನಹುಂಡಿ, ಮೂಡಲಹುಂಡಿ, ಕೆಂಪಿಸಿದ್ದನಹುಂಡಿ ಗ್ರಾಮಗಳ 15 ಯುವಕರಿಗೆ ಬೀಸು ಕಂಸಾಳೆ ತರಬೇತಿ ನೀಡುವ ಮೂಲಕ ಜನಪದ ಕಲಾ ಪ್ರಕಾರವನ್ನು ಉಳಿಸಿ, ಬೆಳೆಸುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ದೆಹಲಿ, ಪಣಜಿ, ನಾಗಪುರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕಂಸಾಳೆ ಪ್ರದರ್ಶನ ನೀಡಿ, ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ನಡೆಯುವ ಹಬ್ಬ, ಜಾತ್ರೆ, ಉತ್ಸವಗಳಲ್ಲಿ ಇವರ ತಂಡ ಪ್ರದರ್ಶನ ನೀಡುತ್ತಿದೆ.

2015ರಲ್ಲಿ ಗೋವಾ ಕನ್ನಡ ಸಂಘದವರು ₹25 ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಿದ್ದರು. ರಾಮನಗರದಲ್ಲಿ ನಡೆದ ಜನಪದ ಉತ್ಸವದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ‘ಜಾನಪದ ಲೋಕ ಪ್ರಶಸ್ತಿ’ ನೀಡಿ ಗೌರವಿಸಿದ್ದರು.

‘ಬದುಕಿಗೆ ಆಸರೆಯಾದ ಕಲೆ’
‘ಬೀಸು ಕಂಸಾಳೆ ಕಲೆಯನ್ನು ವೃತ್ತಿಯಾಗಿ ಸ್ವೀಕರಿಸಿದ ನನಗೆ ಮೋಸವಾಗಿಲ್ಲ. 6 ವರ್ಷಗಳಿಂದ ಜಾನಪದ ಅಕಾಡೆಮಿ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದೇನೆ. ಯುವಕರಿಗೆ ಬೀಸು ಕಂಸಾಳೆ ತರಬೇತಿ ನೀಡಿದ್ದೇನೆ. ನನ್ನ ಮಗ ಕೆ.ಎಂ.ಶಂಕರ ಕಂಸಾಳೆ ಕಲೆಯನ್ನು ಕರಗತ ಮಾಡಿಕೊಂಡು ಮುಂದುವರೆಸುತ್ತಿದ್ದಾನೆ. ಜಾನಪದ ಅಕಾಡೆಮಿಯಿಂದ ವಾರ್ಷಿಕ ಪ್ರಶಸ್ತಿ ಬಂದಿರುವುದು ಖುಷಿ ನೀಡಿದೆ’ ಎಂದು ಕಂಸಾಳೆ ಮಹದೇವು ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.