ADVERTISEMENT

ಕಬಿನಿ ಹಿನ್ನೀರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹತ್ಯೆ: ಕಗ್ಗಂಟಾದ ಪ್ರಕರಣ

ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದ ತಂಡದ ಕುರಿತು ತನಿಖೆ ಚುರುಕು

ಕೆ.ಎಸ್.ಗಿರೀಶ್
Published 3 ಮೇ 2020, 1:16 IST
Last Updated 3 ಮೇ 2020, 1:16 IST
ಕಬಿನಿ ಹಿನ್ನೀರು ಪ್ರದೇಶದಲ್ಲಿ ಆನೆಗಳ ಹಿಂಡು– ಸಂಗ್ರಹ ಚಿತ್ರ
ಕಬಿನಿ ಹಿನ್ನೀರು ಪ್ರದೇಶದಲ್ಲಿ ಆನೆಗಳ ಹಿಂಡು– ಸಂಗ್ರಹ ಚಿತ್ರ   

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಗುಂಡ್ರೆ ಅರಣ್ಯ ವಲಯದಲ್ಲಿ, ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ಕಬಿನಿ ಹಿನ್ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ ಪ್ರಕರಣವು ದಿನ ಕಳೆದಂತೆ ಜಟಿಲವಾಗುತ್ತಿದೆ.

ಪ್ರಕರಣ ನಡೆದು 8 ದಿನಗಳು ಕಳೆದಿದ್ದು, ಯಾರೊಬ್ಬರನ್ನೂ ವಶಕ್ಕೆ ತೆಗೆದುಕೊಂಡಿಲ್ಲ. ಆದರೆ, ಗುಂಡತ್ತೂರು ಗ್ರಾಮದಲ್ಲಿ ಹಲವು ಮಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಮಾರ್ಚ್ ಮೊದಲ ವಾರದಲ್ಲಿ ಐವರು ಬಂದೂಕುಧಾರಿಗಳ ಚಲನವಲನಗಳು ‘ಕ್ಯಾಮೆರಾ ಟ್ರ್ಯಾಪಿಂಗ್‌’ನಲ್ಲಿ ಕಂಡು ಬಂದಿದ್ದವು. ನಂತರ, ಇವರಲ್ಲಿ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬಂಧಿಸಿದ್ದರು. ಬಂಧನವಾದ ತಿಂಗಳ ಬಳಿಕ ಹತ್ಯೆ ನಡೆದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ.

ADVERTISEMENT

‘ಇವರಿಗೂ ಹತ್ಯೆಗೂ ಇರುವ ಸಂಬಂಧದ ಕುರಿತು ತನಿಖೆ ನಡೆಸಬೇಕು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.‌

ಕಳ್ಳ ಮೀನುಗಾರರ ಉಪಟಳ: ‘ಕಬಿನಿ ಜಲಾಶಯದ ಮೀನುಗಾರಿಕೆಯನ್ನು ಟೆಂಡರ್ ಪ್ರಕ್ರಿಯೆಗೆ ಒಳಪಡಿಸಿದ ನಂತರ ಕೆಲವರು ಅಕ್ರಮವಾಗಿ ಮೀನು ಹಿಡಿಯತೊಡಗಿದರು. ಇವರಿಗೂ, ಟೆಂಡರ್‌ ಪಡೆದವರಿಗೂ ಹಲವು ಬಾರಿ ಸಂಘರ್ಷಗಳಾಗಿದ್ದು, ಐದು ವರ್ಷಗಳಲ್ಲಿ ಮೂರು ಕೊಲೆಗಳೂ ನಡೆದಿವೆ. ಹೀಗಾಗಿ, ಪ್ರಕರಣದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುವವರ ಪಾತ್ರವನ್ನು ನಿರಾಕರಿಸುವಂತಿಲ್ಲ’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಬಯಸದ ಅರಣ್ಯ ಇಲಾಖೆಯ ಮತ್ತೊಬ್ಬ ಅಧಿಕಾರಿ.

ಈ ಬಗ್ಗೆ ಪ್ರತಿಕ್ರಿಯಿಸಿದ ಎನ್.ಬೇಗೂರು ಗ್ರಾಮ ಪಂಚಾಯಿತಿಯ ಸದಸ್ಯರೊಬ್ಬರು, ‘ಅರಣ್ಯ ಇಲಾಖೆಯ ಸಿಬ್ಬಂದಿಯನ್ನೇ ಹತ್ಯೆ ಮಾಡುವಂತಹ ಕಳ್ಳ ಮೀನುಗಾರರ ಗುಂಪುಗಳು ಕಾರ್ಯಾಚರಿಸುತ್ತಿರುವುದು ಗಮನಕ್ಕೆ ಬಂದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.