ADVERTISEMENT

ಸಚಿವ ಎಸ್‌.ಟಿ.ಸೋಮಶೇಖರ್ ಅವರನ್ನು ಶ್ಲಾಘಿಸಿದ ಜಿ.ಟಿ.ದೇವೇಗೌಡ

ಕುಂಬಾರಕೊಪ್ಪಲಿನ ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 3:05 IST
Last Updated 8 ಫೆಬ್ರುವರಿ 2021, 3:05 IST
ಕುಂಬಾರಕೊಪ್ಪಲಿನ ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭಾನುವಾರ ಸಚಿವ ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಕುಂಬಾರಕೊಪ್ಪಲಿನ ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭಾನುವಾರ ಸಚಿವ ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಮೈಸೂರು: ‘ಯಾವುದೇ ಪಕ್ಷದವರಿರಲಿ, ಯಾವುದೇ ಶಾಸಕರ ವಿಧಾನಸಭಾ ಕ್ಷೇತ್ರಗಳಿರಲಿ ಪಕ್ಷಭೇದ ತೋರದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಗೆ ಸಚಿವ ಎಸ್.ಟಿ.ಸೋಮಶೇಖರ್ ಕೆಲಸ ಮಾಡುತ್ತಿದ್ದಾರೆ’ ಎಂದು ಶಾಸಕ ಜಿ.ಟಿ.ದೇವೇಗೌಡ ಶ್ಲಾಘಿಸಿದರು.

ಇಲ್ಲಿನ ಕುಂಬಾರಕೊಪ್ಪಲಿನ ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭಾನುವಾರ ಸೋಮಶೇಖರ್ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಈಗಾಗಲೇ ಇವರು 2 ಬಾರಿ ರಾಜ್ಯ ಸುತ್ತಿ ಬಂದಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಸಹಾಯಧನ ನೀಡಲು ಒಂದು ಬಾರಿ ಹಾಗೂ ಆರ್ಥಿಕ ಸ್ಪಂದನ ಕಾರ್ಯಕ್ರಮಗಳ ವಿತರಣೆ ಮೂಲಕ ಮತ್ತೊಂದು ಬಾರಿ ರಾಜ್ಯದ ವಿವಿಧೆಡೆ ಖುದ್ದು ಭೇಟಿ ನೀಡಿದ್ದಾರೆ. ಮೈಸೂರು ಜಿಲ್ಲೆಗೆ ವಾರದಲ್ಲಿ ಎರಡು ಬಾರಿ ಭೇಟಿ ನೀಡುತ್ತಿದ್ದಾರೆ. ಇವರ ನೇತೃತ್ವದಲ್ಲಿ ಸ್ವಚ್ಛತೆಗೆ ಮೈಸೂರು ಮತ್ತೊಮ್ಮೆ ನಂಬರ್ 1 ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕ ಒಕ್ಕೂಟದ ಅಧ್ಯಕ್ಷರಾದ ಡಿ. ಮಾದೇಗೌಡ ಮಾತನಾಡಿ, ‘ಸಚಿವರಾದವರು ದೇವಸ್ಥಾನಗಳಿಗೆ ಹೋಗುತ್ತಾರೆ. ಆದರೆ, ಕಸ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿದ್ದಾರೆಂದರೆ ಅವರ ಬದ್ಧತೆ ಹಾಗೂ ಇಚ್ಛಾಶಕ್ತಿಯನ್ನು ಅರ್ಥಮಾಡಿಕೊಳ್ಳಬೇಕು. ಇದು ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಕಾರ್ಯವೈಖರಿಯನ್ನು ಸೂಚಿಸುತ್ತದೆ’ ಎಂದು ಹೇಳಿದರು.

ಕಸ ವಿಂಗಡಣೆ, ನಿರ್ವಹಣೆ ಹಾಗೂ ಜನರ ಜವಾಬ್ದಾರಿಗಳ ಬಗೆಗಿನ ಮಾಹಿತಿಯುಳ್ಳ ‘ಸಮುದಾಯದ ಸಹಭಾಗಿತ್ವದಲ್ಲಿ ಘನತ್ಯಾಜ್ಯ ನಿರ್ವಹಣೆ’ ಕೈಪಿಡಿಯನ್ನು ಎಸ್.ಟಿ.ಸೋಮಶೇಖರ್ ಬಿಡುಗಡೆಗೊಳಿಸಿದರು.

‘ಮುಡಾ’ ಅಧ್ಯಕ್ಷ ಎಚ್.ವಿ.ರಾಜೀವ್, ಪೊಲೀಸ್ ಆಯುಕ್ತ ಚಂದ್ರಗುಪ್ತ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ‘ಮುಡಾ’ ಆಯುಕ್ತ ನಟೇಶ್,ಫೆಡರೇಶನ್ ಆಫ್ ಮೈಸೂರು ಸಿಟಿ ಕಾರ್ಪೋರೇಶನ್ ವಾರ್ಡ್ ಪಾರ್ಲಿಮೆಂಟ್‌ನ ನಾಗಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.