ಮೈಸೂರು: ಮಹಾತ್ಮ ಗಾಂಧೀಜಿ ಅವರ ಜೀವನ ಮತ್ತು ಸಾಧನೆ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಕಂಬಿ ಉದ್ಘಾಟಿಸಿದರು.
ನಗರದ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿ ಎದುರು ಭಾನುವಾರ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿರುವ, ಗಾಂಧೀಜಿಯವರ ಜೀವನ ಮತ್ತು ಸಾಧನೆ ಕುರಿತ ಈ ಛಾಯಾಚಿತ್ರ ಪ್ರದರ್ಶನ ಅ.8ರವರಗೆ ನಡೆಯಲಿದೆ.
ಗಾಂಧೀಜಿ ವಿಚಾರಧಾರೆ ಹಾಗೂ ಛಾಯಾಚಿತ್ರ ಪ್ರದರ್ಶನ ಬಾಲ್ಯ ಹಾಗೂ ಶಿಕ್ಷಣ, ವಕೀಲ ವೃತ್ತಿ ಹಾಗೂ ಪತ್ನಿ ಕಸ್ತೂರ ಬಾ ಬಗ್ಗೆ ಪರಿಚಯಿಸುತ್ತದೆ. ಸಬರಮತಿ ಆಶ್ರಮ, ಜಲಿಯನ್ ವಾಲಾಬಾಗ್ ಘಟನೆ, ಬೆಳಗಾವಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕಾರ, ಉಪ್ಪಿನ ಕಾಯ್ದೆ ಉಲ್ಲಂಘಿಸಿ ಉಪ್ಪಿನ ಸತ್ಯಾಗ್ರಹ ನಡೆಸಿದ್ದರ ಬಗ್ಗೆ ಬೆಳಕು ಚೆಲ್ಲಿದೆ.
ಗಾಂಧೀಜಿ ಮತ್ತು ಜಿನ್ನಾ ಮಾತುಕತೆ, ಭಾರತ ಬಿಟ್ಟು ತೊಲಗಿ ಠರಾವು ಮುಂದಾಳತ್ವ ಹಾಗೂ ಲಾರ್ಡ್ ಮತ್ತು ಲೇಡಿ ಮೌಂಟ್ ಬ್ಯಾಟನ್ ಅವರು ಭಾರತೀಯರ ಕೈಗೆ ಅಧಿಕಾರ ಹಸ್ತಾಂತರ ವಿಚಾರವಾಗಿ ಗಾಂಧೀಜಿ ಅವರಿಂದ ಮಾರ್ಗದರ್ಶನ ಕೇಳಿದ ಚಿತ್ರಗಳು ಪ್ರದರ್ಶನದಲ್ಲಿವೆ.
ಗಾಂಧೀಜಿ ನಡೆಸಿದ ಪ್ರಾರ್ಥನಾ ಸಭೆ, ಶಾಂತಿ ಮಂತ್ರ, ಪ್ರಾಣಿ ಪ್ರೀತಿ, ಸರಳತೆ, ದೂರದೃಷ್ಟಿ ಹಾಗೂ ವಿಚಾರಧಾರೆಗಳ ನೈಜತೆಯನ್ನು ಈ ಪ್ರದರ್ಶನ ಪ್ರತಿಬಿಂಬಿಸುತ್ತಿದೆ. ಒಟ್ಟಾರೆಯಾಗಿ ಬಾಲ್ಯ, ಶಿಕ್ಷಣ, ಹೋರಾಟ, ಸತ್ಯಾಗ್ರಹಗಳು ಪ್ರಮುಖರೊಡಗಿನ ಮಾತುಕತೆ ನಡೆಸುವುದನ್ನು ನೋಡಬಹುದು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜು.ಆರ್, ಮಹೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.