ಮೈಸೂರು: ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ವಿನೂತನ ಅಭಿಯಾನ ಮುಂದುವರೆದಿದೆ.
ಮಕ್ಕಳ ದಿನಾಚರಣೆ ಅಂಗವಾಗಿ ತಾವು ಸಂಗ್ರಹಿಸಿದ ವಿವಿಧ ಕಂಪನಿಯ ಪ್ಲಾಸ್ಟಿಕ್ ಕವರ್ಗಳನ್ನು 13 ಕಂಪನಿಗಳಿಗೆ, ಮಕ್ಕಳ ದಿನಾಚರಣೆ ಅಂಗವಾಗಿ ಗುರುವಾರ ಕಳುಹಿಸಿಕೊಟ್ಟರು.
‘ನಿಮ್ಮ ಕಸ ನಿಮಗೆ, ನಾಳೆಗಳು ನಮ್ಮದು’ ಎಂಬ ಧ್ಯೇಯವನ್ನಿಟ್ಟುಕೊಂಡು, ವಿವಿಧ ಕಂಪನಿಗಳ ಪ್ಲಾಸ್ಟಿಕ್ ಕವರುಗಳನ್ನು ಆಯಾ ಕಂಪನಿಗಳಿಗೆ ವಾಪಸು ಕಳಿಸುವ ಮೂಲಕ, ವಿನೂತನ ಮಾದರಿಯ ಅಭಿಯಾನ ಕೈಗೊಂಡ ವಿದ್ಯಾರ್ಥಿಗಳು, ಐದನೇ ಕಂತಿನ ಕಸವನ್ನು ಹೆಗ್ಗಡಹಳ್ಳಿಯ ಪೋಸ್ಟ್ ಮಾಸ್ಟರ್ ಸುರೇಶ್ ಮೂಲಕ ಕಂಪನಿಗಳಿಗೆ ರವಾನಿಸಿದರು.
ಮಕ್ಕಳ ದಿನಾಚರಣೆ ಅಂಗವಾಗಿ ಬಣ್ಣ ಬಣ್ಣದ ಉಡುಗೆಯಲ್ಲಿ ಶಾಲಾ ಬ್ಯಾಗಿನ ಹೊರೆಯಿಲ್ಲದೆ ಆಗಮಿಸಿದ್ದ ಮಕ್ಕಳು, ದಿನವಿಡಿ ಆಡಿ ನಲಿದರು. ಶಾಲೆಯ ಶಿಕ್ಷಕರು ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಿ ಬಹುಮಾನಗಳನ್ನು ವಿತರಿಸಿದರು. ನೃತ್ಯಗಳನ್ನು ಮಾಡಿಸಿದರು. ಬಡ್ತಿ ಹೊಂದಿ ವರ್ಗಾವಣೆಯಾದ ಶಾಲೆಯ ಡಿ ದರ್ಜೆ ನೌಕರ ನಟರಾಜು ಅವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.
ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಪಾಠದ ಹೊರೆಯಿಲ್ಲದೆ ಹಾಡು, ಕುಣಿತ, ಆಟ, ಬಹುಮಾನಗಳದ್ದೇ ಕಾರುಬಾರು ಕಂಡುಬಂದಿತು. ಮಕ್ಕಳಿಗಾಗಿ ಮುಖ್ಯಶಿಕ್ಷಕರ ನೇತೃತ್ವದಲ್ಲಿ ಶಿಕ್ಷಕರು ಮಧ್ಯಾಹ್ನ ವಿಶೇಷ ಸಿಹಿಯೂಟದ ವ್ಯವಸ್ಥೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.