ADVERTISEMENT

ಗ್ಯಾಸ್ ರೀಫಿಲ್ಲಿಂಗ್ ದಂಧೆ: ಬಂಧನ

ಸಿಸಿಬಿ ಪೊಲೀಸರಿಂದ ಸಿಲಿಂಡರ್, ಮೋಟರ್‌, ನಗದು ವಶ; ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 9:14 IST
Last Updated 14 ಫೆಬ್ರುವರಿ 2020, 9:14 IST

ಮೈಸೂರು: ಗ್ಯಾಸ್‌ ರೀಫಿಲ್ಲಿಂಗ್‌ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಆತನಿಂದ ಸಿಲಿಂಡರ್, ಮೋಟರ್, ನಗದು ವಶಪಡಿಸಿಕೊಂಡಿದ್ದಾರೆ.

ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಗೌಸಿಯಾನಗರದ ಸಮೀರ್ ಬಂಧಿತ ಆರೋಪಿ.

ಖಚಿತ ಮಾಹಿತಿ ಮೇರೆಗೆ ಈತನ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ, ಸಮೀರ್ ದಂಧೆ ನಡೆಸುತ್ತಿದ್ದುದು ಪತ್ತೆಯಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸ್ನೇಹದ ಹೆಸರಲ್ಲಿ ವಂಚನೆ
‘ದಟ್ಟಗಳ್ಳಿಯ ವಿಷ್ಣು ಎಂಬಾತ ನನ್ನ ಮಗಳನ್ನು ಪರಿಚಯ ಮಾಡಿಕೊಂಡು, ಸ್ನೇಹದ ಹೆಸರಿನಲ್ಲಿ ನಂಬಿಸಿ, ಈಕೆಯಿಂದ 140 ಗ್ರಾಂ ಚಿನ್ನದ ಒಡವೆಗಳನ್ನು ಪಡೆದುಕೊಂಡಿದ್ದಾನೆ. ಸಕಾಲಕ್ಕೆ ವಾಪಸ್‌ ಕೊಡದಿದ್ದಾಗ, ಕೇಳಿದ್ದಕ್ಕೆ ನಿಂದಿಸಿ ಧಮ್ಕಿ ಹಾಕಿದ್ದಾನೆ’ ಎಂದು ನಂದಪ್ರಕಾಶ್‌ ಎಂಬುವವರು ದೂರು ನೀಡಿದ್ದಾರೆ ಎಂದು ಕುವೆಂಪು ನಗರ ಪೊಲೀಸರು ತಿಳಿಸಿದ್ದಾರೆ.

ಗಲಾಟೆ: ವಿಡಿಯೊ ವೈರಲ್
ಮೈಸೂರು–ನಂಜನಗೂಡು ರಸ್ತೆಯ ಕಡಕೊಳ ಸಮೀಪದ ಟೋಲ್‌ ಬಳಿ ಸರ್ಕಾರಿ ಬಸ್ ಚಾಲಕ ಹಾಗೂ ಟೋಲ್ ಸಿಬ್ಬಂದಿ ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೊ, ಸಾಮಾಜಿಕ ಜಾಲತಾಣದಲ್ಲಿ ಈ ಭಾಗದಲ್ಲಿ ವೈರಲ್ ಆಗಿದೆ.

ನಂಜನಗೂಡಿನಿಂದ ಮೈಸೂರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸನ್ನು ತಡೆದ ಟೋಲ್ ಸಿಬ್ಬಂದಿ, ಶುಲ್ಕ ನೀಡುವಂತೆ ಕೇಳಿದ್ದಾರೆ. ಈ ವೇಳೆ ಬಸ್ ಚಾಲಕ ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು, ಕೈ-ಕೈ ಮಿಲಾಯಿಸಿದ್ದಾರೆ.

ಬಸ್‌ನಲ್ಲಿದ್ದ ಪ್ರಯಾಣಿಕರು, ಟೋಲ್‌ನಲ್ಲಿದ್ದ ಸಾರ್ವಜನಿಕರೇ ಇಬ್ಬರನ್ನು ಸಮಾಧಾನ ಪಡಿಸಿ, ಹೊಡೆದಾಟ ಬಿಡಿಸಿದ್ದಾರೆ. ಇದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದವರು ವೈರಲ್ ಮಾಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.