
ಸರಗೂರು: ಹುಣಸೂರು-ಎನ್.ಬೇಗೂರು ರಸ್ತೆಯಲ್ಲಿನ ಕಬಿನಿ ಬಲದಂಡೆ ಬಳಿ ಗುರುವಾರ ಬೆಳಿಗ್ಗೆ ನಿಯಂತ್ರಣ ತಪ್ಪಿದ ಗೂಡ್ಸ್ ಆಟೊ ಪಲ್ಟಿಯಾಗಿ 15 ಮಂದಿ ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.
ತಾಲ್ಲೂಕಿನ ಕೊತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂತಗಾಲದಹುಂಡಿ ಗ್ರಾಮದ ಹರ್ಷಿತಾ, ಮಂಜುಳಾ, ಜ್ಯೋತಿ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ ಪುಟ್ಟಿ, ಪುಟ್ಟಮ್ಮ, ಭಾಗ್ಯ, ಜೌಡಮ್ಮ, ಶೃತಿ, ಮಸದೇವಮ್ಮ, ನಾಗಮ್ಮ, ಕಾಳಮ್ಮ, ಅಶ್ವಿನಿ, ಮಾದಮ್ಮ, ಸಿದ್ದಶಟ್ಟಿ, ಮಾದಮ್ಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪಟ್ಟಣದ ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೊಂತಗಾಲದಹುಂಡಿಯಿಂದ 15ಕ್ಕೂ ಹೆಚ್ಚು ಮಹಿಳೆಯರು ಶುಂಠಿ ಕೆಲಸಕ್ಕಾಗಿ ಗೂಡ್ಸ್ ಆಟೋದಲ್ಲಿ ತೆರಳಿದ್ದಾಗ ಗೂಡ್ಸ್ ಆಟೊ ಪಲ್ಟಿ ಹೊಡೆದಿದ್ದು, ಆಟೋದಲ್ಲಿದ್ದ ಎಲ್ಲರೂ ಕೆಳಗೆ ಬಿದ್ದಿದ್ದಾರೆ. ಕೂಡಲೇ ರಸ್ತೆಯಲ್ಲಿ ಓಡಾಡುತ್ತಿದ್ದ ಪ್ರಯಾಣಿಕರು ಆಟೋದ ಕೆಳಗಡೆ ಸಿಲುಕಿಕೊಂಡಿದ್ದವರನ್ನು ರಕ್ಷಣೆ ಮಾಡಿದ್ದಾರೆ.
ಘಟನೆ ಬೆಳಿಗ್ಗೆ 7.30ಕ್ಕೆ ನಡೆದರೂ 9 ಗಂಟೆಯಾದರೂ ಆ್ಯಂಬ್ಯುಲೆನ್ಸ್ ಸ್ಥಳಕ್ಕೆ ಬರಲಿಲ್ಲ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ತಾಲ್ಲೂಕು ಆಡಳಿತ, ಶಾಸಕರ ವಿರುದ್ಧ ಕಿಡಿಕಾರಿದರು. ಸರಗೂರಿಗೆ ಸರ್ಕಾರ ಅಂಬ್ಯುಲೆನ್ಸ್ ಸೇವೆ ಒದಗಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.
ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.