ತಿ.ನರಸೀಪುರ: ‘ ಯುವ ಜನಕ್ಕೆ ವಿದ್ಯಾರ್ಥಿ ಹಂತದಿಂದಲೇ ಅಗತ್ಯ ತರಬೇತಿ, ಮಾರ್ಗದರ್ಶನ ಮಾಡುವ ಸರ್ಕಾರದ ಯೋಜನೆಗಳು ಸದೃಢ ವ್ಯಕ್ತಿತ್ವ ಬೆಳೆಸಲು ಸಹಕಾರಿ’ ಎಂದು ಬನ್ನೂರು ಪುರಸಭೆಯ ಮುಖ್ಯಾಧಿಕಾರಿ ಪುಟ್ಟರಾಜು ಹೇಳಿದರು.
ಬನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೈಸೂರು ಮೇರಾ ಯುವ ಭಾರತ್ , ನನ್ನವ್ವ ಸಾಂಸ್ಕೃತಿಕ ಕಲಾತಂಡ ಹಾಗೂ ಕಾಲೇಜಿನ ಎನ್ ಎಸ್ ಎಸ್ ಘಟಕ ಬುಧವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಮೇರಾ ಯುವ ಭಾರತ್ ಕಚೇರಿಯಿಂದ ಯುವಜನರಿಗೆ ಯೋಜನೆಗಳ ಮಾಹಿತಿ ಕಾರ್ಯಾಗಾರದಲ್ಲಿ ಸ್ವಚ್ಛ ಭಾರತ್, ಕೌಶಲ ಭಾರತ, ಡಿಜಿಟಲ್ ಇಂಡಿಯಾ, ಜಲಜೀವನ್ ಮಿಷನ್ ಬಗ್ಗೆ ಮಾಹಿತಿ ನೀಡುತ್ತಿದ್ದು, ಸ್ವಚ್ಛ ಭಾರತ ಯೋಜನೆಯಲ್ಲಿ ಸ್ವಚ್ಛತೆ ಯಿಂದ ಆರೋಗ್ಯ, ದೇಶದ ಪ್ರಗತಿ ಎಂಬುದನ್ನು ಸರ್ಕಾರ ವಿದ್ಯಾರ್ಥಿಗಳಿಗೆ ತಿಳಿಸಿದೆ ಎಂದರು.
ಹಿರಿಯ ಆರೋಗ್ಯ ನಿರೀಕ್ಷಕ ಹರಿಪ್ರಸಾದ್ ಜಲಜೀವನ್ ಮಿಷನ್ ಕುರಿತು ಮಾತನಾಡಿ, ಮನೆ ಮನೆಗೂ ಶುದ್ಧ ಕುಡಿಯುವ ನೀರನ್ನು ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಅನುದಾನದ ಜಲಜೀವನ್ ಮಿಷನ್ ಅದ್ಭುತ ಯೋಜನೆ ನೀಡಿದೆ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯಕ್ರಮ ವ್ಯವಸ್ಥಾಪಕಿ ರೂಪಶ್ರೀ, ಕೌಶಲ ಭಾರತದ ಕುರಿತು ಮಾತನಾಡಿ, ಯುವಕ - ಯುವತಿಯರಿಗೆ ಕೌಶಲ, ಪ್ರತಿಭೆಗೆ ಪೂರಕವಾದ ಅವಕಾಶಗಳನ್ನು ಸರ್ಕಾರ ಈ ಯೋಜನೆ ಮುಖಾಂತರ ನೀಡುತ್ತಿದೆ ಎಂದರು.
ತಾಲ್ಲೂಕು ಪಂಚಾಯಿತಿ ವಲಯ ಮೇಲ್ವಿಚಾರಕ ಎಂ.ಸುರೇಶ್ ಡಿಜಿಟಲ್ ಇಂಡಿಯಾ ಕುರಿತು ಮಾತನಾಡಿ, ಪ್ರತಿ ಕ್ಷೇತ್ರವು ಡಿಜಿಟಲೀಕರಣವಾಗುತ್ತಿದೆ. ಕಾಗದದ ಮೂಲಕ ನಡೆಯುತ್ತಿದ್ದ ಕಾರ್ಯಗಳು ಡಿಜಿಟಲೀಕರಣಕ್ಕೆ ಒಳಪಟ್ಟು ಎ ದಾಖಲೆಗಳು ಸುರಕ್ಷಿತವಾಗಿಸಲು ಸಹಕಾರಿಯಾಗಿದೆ ಎಂದರು.
ಪ್ರಾಂಶುಪಾಲ ಎಂ ಬಿ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಧರಣೇಶ್, ನನ್ನವ್ವ ಸಾಂಸ್ಕೃತಿಕ ಕಲಾತಂಡದ ಅಧ್ಯಕ್ಷ ಯಾಚೇನಹಳ್ಳಿ ಮಹದೇವ್, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.