ADVERTISEMENT

ಜಿಎಸ್‌ಟಿ ನೋಟಿಸ್; ಕೇಂದ್ರವೇ ಹೊಣೆ: ಎಂ.ಲಕ್ಷ್ಮಣ್‌

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 2:32 IST
Last Updated 23 ಜುಲೈ 2025, 2:32 IST
<div class="paragraphs"><p>ಎಂ.ಲಕ್ಷ್ಮಣ್‌</p></div>

ಎಂ.ಲಕ್ಷ್ಮಣ್‌

   

ಮೈಸೂರು: ‘ಸಣ್ಣ ವರ್ತಕರಿಗೆ ಜಿಎಸ್‌ಟಿ ನೋಟಿಸ್ ವಿಚಾರದಲ್ಲಿ ಬಿಜೆಪಿ ನಾಯಕರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆಗ್ರಹಿಸಿದರು.

ಇಲ್ಲಿನ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಮುಂಭಾಗ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಕಳೆದೊಂದು ವಾರದಿಂದ ಕೆಲವು ವರ್ತಕರಿಗೆ ನಿರಂತರ ನೋಟಿಸ್ ನೀಡಲಾಗುತ್ತಿದೆ. ರಾಜ್ಯ ಸರ್ಕಾರವೇ ನೋಟಿಸ್ ನೀಡುತ್ತಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಸರಿಯಾಗಿ ಮಾಹಿತಿ ನೀಡಿ’ ಎಂದರು.

ADVERTISEMENT

‘ಜಿಎಸ್‌ಟಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ವಾಣಿಜ್ಯ ತೆರಿಗೆ ಇಲಾಖೆಯು ಕೇಂದ್ರದ ನಿಯಮಗಳನ್ನು ಆಧರಿಸಿ ನೋಟಿಸ್ ನೀಡುತ್ತಿದೆ. ಜಿಎಸ್‌ಟಿ ಸೆಕ್ಷನ್ 22 ಪ್ರಕಾರ ಪ್ರತಿ ವರ್ತಕ ಜಿಎಸ್‌ಟಿಗೆ ನೋಂದಣಿ ಮಾಡಬೇಕು. ವಾರ್ಷಿಕ ₹40 ಲಕ್ಷ ಆದಾಯ ಮೀರಿದರೆ ತೆರಿಗೆ ವ್ಯಾಪ್ತಿಗೆ ಬರುತ್ತಾರೆ ಎಂದಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ’ ಎಂದು ತಿಳಿಸಿದರು.

‘ಜಿಎಸ್‌ಟಿಯಲ್ಲ, ಗಬ್ಬರ್‌ಸಿಂಗ್‌ ಟ್ಯಾಕ್ಸ್‌ ಎಂದು ರಾಹುಲ್ ಗಾಂಧಿ ಟೀಕಿಸಿದ್ದು ನಿಜವಾಗಿದೆ. ಒಂದೇ ಪದಾರ್ಥಕ್ಕೆ ಆರೇಳು ಬಾರಿ ತೆರಿಗೆ ಬೀಳುತ್ತಿದೆ. ಭತ್ತ ಬೆಳೆಯುವ ಪ್ರಕ್ರಿಯೆಯಿಂದ ಹಿಡಿದು ಇಡ್ಲಿ ತಯಾರಿಕೆಯವರೆಗೆ ಪ್ರತಿ ಹಂತದಲ್ಲೂ ತೆರಿಗೆ ಹಾಕಲಾಗುತ್ತಿದೆ. ಇದರಿಂದ ಜನರಿಗೆ ತೆರಿಗೆಯು ಹೊರಲಾರದ ಹೊರೆಯಾಗುತ್ತಿದೆ’ ಎಂದರು.

‘ಜಿಎಸ್‌ಟಿ ನಮ್ಮನ್ನು ಕೊಲ್ಲುತ್ತಿದೆ. ನಿರ್ಮಲಾ ಸೀತಾರಾಮನ್, ಮೋದಿ ಅವರಿಗೆ ಮಾನ ಮರ್ಯಾದೆ ಇದ್ದರೆ ಸ್ಟಷ್ಟೀಕರಣ ಕೊಡಿ. ಸಣ್ಣ ವರ್ತಕರಿಗೆ ತೊಂದರೆ ಕೊಡಬೇಡಿ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲ. ಅಧಿಕಾರಿಗಳು, ವರ್ತಕರು ಜನರ ದಾರಿ ತಪ್ಪಿಸಬಾರದು’ ಎಂದು ಒತ್ತಾಯಿಸಿದರು.

‘ತೆರಿಗೆ ನೋಟಿಸ್ ವಿರೋಧಿಸಿ ವರ್ತಕರು ಹಮ್ಮಿಕೊಂಡಿರುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲವಿದೆ. ಏನಿದ್ದರೂ ಕೇಂದ್ರದ ವಿರುದ್ಧ ಹೋರಾಟ ನಡೆಯಲಿ. ಇಡೀ ದೇಶದಲ್ಲಿ ಈ ಸಮಸ್ಯೆ ಇದೆ. ಶೇ 90ರಷ್ಟು ವರ್ತಕರು ಜಿಎಸ್‌ಟಿ ನೋಂದಣಿ ಮಾಡಿಕೊಂಡಿದ್ದು, ಶೇ 10ರಷ್ಟು ನೋಂದಣಿ ಆಗಿಲ್ಲ. ಅವರಿಗೆ ಮಾತ್ರ ನೋಟಿಸ್ ಬಂದಿದೆ' ಎಂದು ಹೇಳಿದರು.

‘ಹಾಲು ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ. ಹಾಲು ವರ್ತಕರಿಗೆ ನೋಟಿಸ್ ನೀಡಿಲ್ಲ. ಮೀರಾ ಪಂಡಿತ್‌ರಂತಹ ಐಆರ್‌ಎಸ್‌ ಅಧಿಕಾರಿಗಳು ಜನರು–ಮಾಧ್ಯಮಗಳಿಗೆ ಅರೆ ಮಾಹಿತಿ ನೀಡಬಾರದು’ ಎಂದರು.

ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ಬಿ.ಎಂ. ರಾಮು, ಮಹೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.