ಹುಣಸೂರು: ಸುಡಾನ್ನ ಘರ್ಷಣೆ ಪೀಡಿತ ಖಾರ್ಟೂಮ್ ನಗರದಿಂದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಪಕ್ಷಿರಾಜಪುರದ ಏಳು ಮಂದಿ ಆರು ಕಿ.ಮಿ. ದೂರದ ಉಂಬಡ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಸಾಗಿ ಹೋಟೆಲ್ವೊಂದರಲ್ಲಿ ನೆಲೆ ಕಂಡುಕೊಂಡಿದ್ದಾರೆ.
ಕಳೆದ ಒಂದು ವಾರದಿಂದ ಬಾಂಬ್ ಹಾಗೂ ಗುಂಡಿನ ಸುರಿಮಳೆಯ ಸದ್ದು ನಾಲ್ಕು ಗೋಡೆಗಳ ಮಧ್ಯೆ ಸಿಲುಕಿದ್ದ ಹಕ್ಕಿಪಿಕ್ಕಿ ಜನರಲ್ಲಿ ಇನ್ನಿಲ್ಲದಂತೆ ಜೀವಭಯ ಉಂಟುಮಾಡಿತ್ತು. ಸಂಘರ್ಷ ವಿರಾಮದ ಸಮಯದಲ್ಲಿ ಅವರು 6 ಕಿ.ಮಿ. ದೂರದ ಉಂಬಡ ಎಂಬ ಸ್ಥಳಕ್ಕೆ ತೆರಳಿ ನೆಮ್ಮದಿಯಿಂದ ಇದ್ದಾರೆ.
‘ಒಂದು ತಿಂಗಳ ಹಿಂದೆ ಮಕ್ಕಳಾದ ಕ್ರಾಂತ್ ಕುಮಾರ್, ಶಕ್ತಿಕುಮಾರ್, ಸೊಸೆಯರಾದ ಗೀತಾ, ವೈಶಾಲಿ ಮತ್ತು ಅಳಿಯ ಶರತ್ ಅವರು ಆಯುರ್ವೇದ ಎಣ್ಣೆ ಮಾರಾಟ ಮತ್ತು ಮಸಾಜ್ ಮಾಡಿ ಹಣ ಸಂಪಾದನೆಗೆ ಸುಡಾನ್ಗೆ ತೆರಳಿದ್ದರು. ಅಲ್ಲಿನ ಖಾರ್ಟೂಮ್ ನಗರದ ಮನೆಯೊಂದರಲ್ಲಿ ಉಳಿದಿದ್ದರು. ಏಕಾಏಕಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಸಂಘರ್ಷ ಆರಂಭವಾಗಿ ಎಲ್ಲವೂ ನಿರ್ನಾಮವಾಗಿದೆ. ಈ ಬಗ್ಗೆ ನಿತ್ಯ ವಾಟ್ಸ್ಆ್ಯಪ್ ವಿಡಿಯೋ ಕರೆ ಮೂಲಕ ನೋಡುತ್ತಿದ್ದೇವೆ. ಆಹಾರ, ನೀರಿನ ಸಮಸ್ಯೆ ಅನುಭವಿಸಿದ್ದಾರೆ’ ಎಂದು ಪಕ್ಷಿರಾಜಪುರದ ಕಾಶಿನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜೀವ ಹಿಡಿದುಕೊಂಡು ನೆರೆಯ ಗ್ರಾಮವಾದ ಉಂಬಡ ಎಂಬಲ್ಲಿಗೆ ಯಾವುದೇ ರಕ್ಷಣೆ ಇಲ್ಲದೆ ತೆರಳಿ ಸುರಕ್ಷಿತವಾದ ಹೋಟೆಲ್ವೊಂದರ ರೂಂನಲ್ಲಿ ಉಳಿದುಕೊಂಡಿದ್ದೇವೆ. ಇಲ್ಲಿ ಯಾರೂ ಇಲ್ಲ, ನಮ್ಮ ಬಳಿ ಹಣವೂ ಇಲ್ಲ’ ಎಂದು ಸುಡಾನ್ನಲ್ಲಿರುವ ಕಾಶಿನಾಥ್ ಕುಟುಂಬದ ಸದಸ್ಯ ಶಕ್ತಿಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಉಂದ್ರಾ ಪ್ರದೇಶದಲ್ಲಿ ಎಲ್ಲವೂ ಸಿಗುತ್ತಿದ್ದು, ಮಿಲಿಟರಿ ಪಡೆ ಸುತ್ತುವರೆದು ಸ್ಥಳೀಯರಿಗೆ ರಕ್ಷಣೆ ನೀಡಿದೆ. ಮಾಲ್ಗಳು ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದು, ಆಹಾರ, ನೀರು ಎಲ್ಲವೂ ಸಿಗುತ್ತಿದೆ. ಈಗ ನಾವು ಬದುಕುಳಿಯುವ ವಿಶ್ವಾಸ ಬಂದಿದೆ’ ಎಂದು ನಿಟ್ಟುಸಿರು ಬಿಟ್ಟರು.
‘ಪಾಸ್ ಪೋರ್ಟ್ ಮತ್ತು ವೀಸಾವನ್ನು ಸ್ಥಳೀಯ ಏಜೆಂಟ್ಗೆ ನೀಡಿದ್ದೆವು. ಸೇನಾ ಪಡೆಗಳ ನಡುವೆ ಸಂಘರ್ಷ ಆರಂಭವಾದ್ದರಿಂದ ದಿಕ್ಕಾಪಾಲಾಗಿದ್ದೇವೆ. ಅವರನ್ನು ಸಂಪರ್ಕಿಸಲು ಆಗುತ್ತಿಲ್ಲ. ಭಾರತದ 58 ಜನರ ಪಾಸ್ ಪೋರ್ಟ್ ಅವರ ಬಳಿ ಉಳಿದಿದ್ದು, ನಮಗೆ ಈಗ ದಾರಿತೋರದಂತಾಗಿದೆ’ ಎಂದು ಕ್ರಾಂತ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
‘ಸ್ಥಳೀಯರ ಬಳಿ ಚಿನ್ನ ಅಡವಿಟ್ಟು ಸಹೋದರರು ₹ 6 ಲಕ್ಷ ಸಾಲ ಪಡೆದು ತೆರಳಿದ್ದರು. ಈಗ ಆ ದೇಶದಲ್ಲಿ ಆಂತರಿಕ ಸಂಘರ್ಷದಿಂದ ಹಿಂದಕ್ಕೆ ಬರುವಂತಾಗಿದೆ. ಮಾಡಿದ ಸಾಲ ತೀರಿಸುವುದಾದರೂ ಹೇಗೆ ಎಂಬ ಗೊಂದಲ ಕಾಡಿದೆ’ ಎಂದು ಕ್ರಾಂತ್ ಕುಮಾರ್ ಸಹೋದರಿ ಐಶಲ್ಯ ನೋವು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.