ಎಚ್.ಡಿ.ಕೋಟೆ: ರಾಜ್ಯ ರೈತ ಸಂಘ ಹಾಗೂ ದಲಿತ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ತಾಲ್ಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಜನಸಾಮಾನ್ಯರ ಓಡಾಟ ಎಂದಿನಂತೆ ಇತ್ತು. ವರ್ತಕರು ಮಾಮೂಲಿನಂತೆ ಬೆಳಿಗ್ಗೆಯಿಂದ ತಮ್ಮ ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿದರು. ಸರ್ಕಾರಿ ಸಾರಿಗೆ ಸೇರಿದಂತೆ ಖಾಸಗಿ ವಾಹನಗಳು ಬೀದಿಗಿಳಿದು ಸಂಚಾರ ಆರಂಬಿಸಿ ಎಂದಿನಂತೆ ಓಡಾಟ ನಡೆಸಿದವು.
ಜನರು ಎಂದಿನಂತೆ ತಮ್ಮ ಕೆಲಸ ಕಾರ್ಯಕ್ಕಾಗಿ ದೂರದ ಊರುಗಳಿಂದ ತಾಲ್ಲೂಕು ಕೇಂದ್ರಕ್ಕೆ ಬಂದಿದ್ದರು. ಆದರೆ, ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲ್ಲದೆ ಕಚೇರಿಗೆ ಬೀಗ ಹಾಕಿದ್ದರಿಂದ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಹೋದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, ‘ಭೂಸ್ವಾಧೀನ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ಬಿಜೆಪಿ ಸರ್ಕಾರ ದುಡಿಯವ ಜನರನ್ನು ಧಮನ ಮಾಡಲು ಹೊರಟಿದೆ ಹಾಗಾಗಿ ಇದೊಂದು ಕೆಟ್ಟ ಕಾನೂನು, ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡಿದ್ದ ವ್ಯಕ್ತಿ ಎಲ್ಲವನ್ನೂ ಕಳೆದುಕೊಂಡು ಉಳ್ಳವರ ಮನೆಯಲ್ಲಿ ಜೀತ ಮಾಡುವ ಕೆಲಸಕ್ಕೆ ಈ ಸರ್ಕಾರಗಳು ಮಾಡುತ್ತಿವೆ’ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಚಾ.ನಂಜುಂಡಮೂರ್ತಿ, ಭೀಮನಹಳ್ಳಿ ಮಹದೇವು, ವಿವೇಕ ಕಾರ್ಯಪ್ಪ, ಅಕ್ಬರ್, ಸಿಪಿಎಂ ಶಿವಣ್ಣ, ಏಜಾಜ್ ಪಾಷ, ಮಾದಪ್ಪ, ಜಿವಿಕ ಬಸವರಾಜು, ಆನಗಟ್ಟಿ ದೇವರಾಜು, ಎಪಿಎಂಸಿ ಅಧ್ಯಕ್ಷ ಜವರನಾಯಕ, ರಾಜೇಂದ್ರ, ಚಾ.ಶಿವಕುಮಾರ್, ಸಣ್ಣಕುಮಾರ್, ಹೆಗ್ಗನೂರು ನಿಂಗರಾಜು, ಸೋಗಹಳ್ಳಿ ಶಿವಣ್ಣ, ರಾಜಶೇಖರ, ಸಿದ್ದರಾಜು, ಹೈರಿಗೆ ಶಿವರಾಜು, ವಡ್ಡರಗುಡಿ ಬಸವರಾಜು, ಮಹದೇವನಾಯಕ, ಚೌಡಹಳ್ಳಿ ಜವರಯ್ಯ, ಮಹೇಶ್, ದಾಸಯ್ಯ, ಪ್ರಸಾದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.