ADVERTISEMENT

ಶಂಖ ಊದಲು ಎಲ್ಲಾ ಕಡೆ ನಾನೇ ಹೋಗಬೇಕು, ನನಗೆ ಸಮಯವಿಲ್ಲ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 6:45 IST
Last Updated 23 ನವೆಂಬರ್ 2021, 6:45 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ಮೈಸೂರು: ‘ಎಲ್ಲಾ ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪ್ರಚಾರ ಮಾಡಲು ನನಗೆ ಸಮಯ ಇಲ್ಲ. ಜೆಡಿಎಸ್‌ನಲ್ಲಿ ಶಂಖ ಊದಲೂ ಜನರಿಲ್ಲ ಎಂಬುದಾಗಿ ಈಶ್ವರಪ್ಪ ಹೇಳಿದ್ದಾರೆ. ಶಂಖ ಊದಲು ಎಲ್ಲಾ ಕಡೆ ನಾನೇ ಹೋಗಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ವಿಧಾನ ಪರಿಷತ್ ಚುನಾವಣೆಗೆ ಏಳು ಕಡೆ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಹಾಸನ, ಮಂಡ್ಯ ಹಾಗೂ ಕೊಡಗಿನಲ್ಲಿ ಮಾತ್ರ ಹೋರಾಟ ನಡೆಸುತ್ತೇವೆ. ಕಳೆದ ಬಾರಿ ನಾಲ್ಕು ಸ್ಥಾನ ಗೆದ್ದಿದ್ದೆವು. ಈ ಬಾರಿ ಅದಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸವಿದೆ’ ಎಂದರು.

‘ಪಕ್ಷಕ್ಕೆ ಯಾರೂ ಅನಿವಾರ್ಯ ಅಲ್ಲ. ಕಾರ್ಯಕರ್ತರು ಶಕ್ತಿ ತುಂಬಿ ನಾಯಕರನ್ನು ಸೃಷ್ಟಿಸುತ್ತಾರೆ’ ಎಂದು ಜಿ.ಟಿ.ದೇವೇಗೌಡ ಹಾಗೂ ಸಂದೇಶ್ ನಾಗರಾಜ್ ಅವರಿಗೆ ತಿರುಗೇಟು ನೀಡಿದರು.

ADVERTISEMENT

ಸಂದೇಶ್ ನಾಗರಾಜ್ ಅವರು ಸ್ಪರ್ಧೆಯಿಂದ ಹಿಂದೆ ಸರಿದು ಎಚ್.ಡಿ.ದೇವೇಗೌಡ ಹಾಗೂ ರೇವಣ್ಣ ಅವರಿಗೆ ಮಾತ್ರ ಧನ್ಯವಾದ ಅರ್ಪಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಹಿಂದೆ ಎರಡೂ ಬಾರಿ ಸ್ಪರ್ಧೆಗೆ ಸಹಾಯ ಮಾಡಿದ ದೇವೇಗೌಡ ಹಾಗೂ ರೇವಣ್ಣ ಅವರನ್ನು ಸ್ಮರಿಸಿ ಕೊಂಡಿದ್ದಾರೆ ಅಷ್ಟೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.