ಮೈಸೂರು: ನಗರದಲ್ಲಿ ಶುಕ್ರವಾರ ನಸುಕಿನಲ್ಲಿ ಭಾರಿ ಮಳೆ ಸುರಿದಿದ್ದು, ಚಾಮುಂಡಿ ಬೆಟ್ಟದ ಹೊಸ ನಂದಿ ರಸ್ತೆ ಮತ್ತೆ ಕುಸಿದಿದೆ.
ಮೊದಲು ಕುಸಿದಿದ್ದ ಪ್ರದೇಶಕ್ಕೆ ಸಂಚಾರ ನಿರ್ಬಂಧಿಸಿ ಮಣ್ಣಿನ ಗುಡ್ಡೆಯನ್ನು ಹಾಕಿದ್ದ ಜಾಗದಲ್ಲಿ ಈಗ ಕುಸಿತ ಉಂಟಾಗಿದೆ. ಭಾರಿ ಪ್ರಮಾಣದಲ್ಲಿ ಮಣ್ಣು ಕೆಳಗಿನ ಹಳೆಯ ನಂದಿ ರಸ್ತೆಯವರೆಗೆ ಬಂದಿದೆ. ರಸ್ತೆಯ ಮತ್ತೊಂದು ಭಾಗವೂ ಕುಸಿದಿದ್ದು, ಇಡೀ ರಸ್ತೆಯಲ್ಲಿ ಬಿರುಕುಗಳು ಉಂಟಾಗಿವೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜು, 'ಒಟ್ಟು ಮೂರು ಕಡೆ ಕುಸಿತ ಉಂಟಾಗಿದೆ. ರಸ್ತೆಯಲ್ಲಿ ನಡೆದಾಡುವುದು ಅಪಾಯಕಾರಿ ಎನಿಸಿದೆ. ಈಚೆಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಪರಿಶೀಲನೆ ನಡೆಸಿದಾಗ ಈಗ ಕುಸಿದಿರುವ ಜಾಗದಲ್ಲಿ ಬಿರುಕುಗಳು ಇರಲಿಲ್ಲ. ಮಳೆ ಮುಂದುವರಿದರೆ ಮತ್ತಷ್ಟು ಕುಸಿಯುವ ಸಾಧ್ಯತೆಗಳಿವೆ' ಎಂದರು.
ಶುಕ್ರವಾರ ನಸುಕಿನಲ್ಲಿ 5 ಸೆಂ.ಮೀ ಮಳೆಯಾಗಿದ್ದು, ಇನ್ನೆರಡು ದಿನಗಳ ಕಾಲ ನಗರದಲ್ಲಿ ಭಾರಿ ಮಳೆಯಾಗುವ ಸಂಭವ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.