ADVERTISEMENT

ವಿಮಾನ ನಿಲ್ದಾಣದಲ್ಲಿ ಹೆಲಿಟೂರಿಸಂಗೆ ಅನುಮತಿ: ಸಿ.ಪಿ.ಯೋಗೇಶ್ವರ್

ಮೈಸೂರು ದಸರಾ ವೇಳೆಯಲ್ಲಿ ತಲಕಾಡಿನಲ್ಲಿ ಗಂಗರ ಉತ್ಸವಕ್ಕೆ ಯೋಜನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 13:08 IST
Last Updated 19 ಜುಲೈ 2021, 13:08 IST
ಸಿ.ಪಿ.ಯೋಗೇಶ್ವರ್‌
ಸಿ.ಪಿ.ಯೋಗೇಶ್ವರ್‌   

ತಲಕಾಡು: ಹೆಲಿಟೂರಿಸಂಗಾಗಿ ವಿಮಾನ ನಿಲ್ದಾಣವನ್ನು ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇನ್ನು 15ರಿಂದ 20 ದಿನಗಳಲ್ಲಿ ಬೆಂಗಳೂರಿನಲ್ಲಿ ಹೆಲಿಟೂರಿಸಂ ಆರಂಭವಾಗಲಿದೆ ಎಂದು ಪ್ರವಾಸೋದ್ಯಮ ಖಾತೆ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಬೆಂಗಳೂರಿನ ನಂತರ ಮೈಸೂರಿನಲ್ಲೂ ಹೆಲಿಟೂರಿಸಂ ಆರಂಭವಾಗಲಿದೆ. ಇಲಾಖೆಯ ಯಾವುದೇ ಯೋಜನೆಗೂ ಹಿನ್ನಡೆಯಾಗಿಲ್ಲ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಬಾರಿ ನಡೆಯುವ ಮೈಸೂರು ದಸರಾ ವೇಳೆಯಲ್ಲಿ ತಲಕಾಡಿನಲ್ಲಿಯೂ ಗಂಗರ ಉತ್ಸವ ನಡೆಸಲು ಯೋಜನೆ ರೂಪಿಸಲಾಗುತ್ತಿದೆ. ಇಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಪ್ರವಾಸಿಗರನ್ನು ಸೆಳೆಯಲಾಗುವುದು. ಜತೆಗೆ, ತಲಕಾಡನ್ನು ಪ್ರವಾಸಿ ಸ್ಥಳವಾಗಿ ಅಭಿವೃದ್ಧಿಪಡಿಸಲು ಸಮಿತಿ ರಚಿಸಲಾಗುವುದು ಎಂದು ಮಾಹಿತಿ ನೀಡಿದರು.

ADVERTISEMENT

ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಉತ್ತೇಜನ ನೀಡಲು ತೀರ್ಮಾನಿಸಲಾಗಿದ್ದು, 10 ಜಿಲ್ಲೆಗಳಲ್ಲಿ 2 ಸಾವಿರ ವಿದ್ಯಾರ್ಥಿಗಳು ತಂಗುವಂತಹ ಕಟ್ಟಡ ನಿರ್ಮಿಸಲಾಗುವುದು. ಇಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸೌಕರ್ಯ ಕಲ್ಪಿಸಲಾಗುವುದು. ಕಟ್ಟಡ ನಿರ್ಮಾಣಕ್ಕೆ ಸಮಾಜಕಲ್ಯಾಣ ಇಲಾಖೆ ಸೇರಿದಂತೆ ಮತ್ತಿತ್ತರ ಇಲಾಖೆಗಳ ನೆರವು ಪಡೆಯಲಾಗುವುದು ಎಂದರು.

‘ರೋಪ್‌ವೇ’ ಯೋಜನೆ ಅಂತಿಮದಲ್ಲಿದ್ದು, ನಂದಿಬೆಟ್ಟದಲ್ಲಿ ಶೀಘ್ರದಲ್ಲೇ ಕೆಲಸ ಪ್ರಾರಂಭವಾಗಲಿದೆ. 25 ಜಲಾಶಯಗಳಲ್ಲಿ ಜಲಕ್ರೀಡೆಗಳನ್ನು ಆಯೋಜಿಸುವುದಕ್ಕೂ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮದ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.