ಮೈಸೂರು: ಹೊಯ್ಸಳ ಕನ್ನಡ ಸಂಘವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ‘ಹೊಯ್ಸಳ ಪ್ರಶಸ್ತಿ’ ನೀಡಿ ಗೌರವಿಸಿತು.
ಕುವೆಂಪು ಭಾಷಾ ಭಾರತಿ ಸಂಸ್ಥಾನದ ವಿಶ್ರಾಂತ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ ಅವರು ಶನಿವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ಡಾ.ಜ್ಯೋತಿಶಂಕರ್ (ವ್ಯಾಖ್ಯಾನ), ಡಾ.ಗೀತಾ ಸೀತಾರಾಂ (ಸಂಗೀತ), ಡಾ.ಸಿ.ಜಿ.ಉಷಾದೇವಿ (ಸಾಹಿತ್ಯ), ಡಾ.ಗುಬ್ಬಿಗೂಡು ರಮೇಶ್ (ಅಂಕಣ ಸಾಹಿತ್ಯ), ಡಾ.ಶ್ಯಾಮಪ್ರಸಾದ್ (ಭೂವಿಜ್ಞಾನ), ಡಾ.ಶ್ಯಾಮಸುಂದರ್ (ವೈದ್ಯಕೀಯ), ಸತೀಶ್ ಯಲ್ಲಾಪುರ (ಕುಂಚಕಲೆ), ಸಿ.ವಿ.ಶ್ರೀಧರಮೂರ್ತಿ (ರಂಗಭೂಮಿ), ಕಳಲೆ ಗುರುಸ್ವಾಮಿ (ಸಾಹಿತ್ಯ), ಸಂಗಾಪುರ ನಾಗರಾಜ್ (ರಂಗಭೂಮಿ), ವಸಂತಲಕ್ಷ್ಮಿ ಸೀತಾರಾಮಯ್ಯ (ಗಮಕ), ಚೇತನಾ ಭಟ್ (ಯುವ ಉದ್ಯಮಿ), ಡಾ.ಡಿ.ಎಸ್.ಜಯಪ್ಪಗೌಡ (ಸಾಹಿತ್ಯ) ಮತ್ತು ಎಸ್.ಜಿ.ರಾಮರಾವ್ (ನಾಣ್ಯ ಸಂಗ್ರಹ) ಅವರಿಗೆ ಹೊಯ್ಸಳ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನೃತ್ಯ ಕಲಾವಿದೆ ಡಾ.ತುಳಸೀ ರಾಮಚಂದ್ರ ಅವರು, ಹೊಯ್ಸಳ ಸಂಘ ಪ್ರತಿವರ್ಷವೂ ಸಾಧಕರನ್ನು ಸನ್ಮಾನಿಸುತ್ತಾ ಬಂದಿದೆ. ಎಲೆಮರೆಯಲ್ಲಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಂತಸದ ಸಂಗತಿ ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರು ಸವಿಗನ್ನಡ ಪತ್ರಿಕೆ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ವಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಕರ್ನಾಟಕ ನಾಟಕ ಅಕಾಡೆಮಿ ವಿಶ್ರಾಂತ ರಿಜಿಸ್ಟ್ರಾರ್ ಎ.ಎಸ್.ನಾಗರಾಜ್, ರಂಗಕರ್ಮಿ ಬಿ.ಎಂ.ರಾಮಚಂದ್ರ, ಪತ್ರಕರ್ತ ಈಚನೂರು ಕುಮಾರ್, ಹೊಯ್ಸಳ ಕನ್ನಡದ ಸಂಘದ ಅಧ್ಯಕ್ಷ
ಮಡ್ಡೀಕೆರೆ ಗೋಪಾಲ್, ಪ್ರಧಾನ ಕಾರ್ಯದರ್ಶಿ ರಂಗನಾಥ್ ಪಾಲ್ಗೊಂಡಿದ್ದರು.
ರಸರಾಮಾಯಣ ಕೃತಿ ಗಾಯನ: ಸವಿಗನ್ನಡ ಪತ್ರಿಕೆ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಗಜಾನನ ಈಶ್ವರ ಹೆಗಡೆ ಅವರ ರಸರಾಮಾಯಣ ಕೃತಿಯ ಗಾಯನ, ವ್ಯಾಖ್ಯಾನ ಮತ್ತು ಚಿತ್ರ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸುಬ್ರಾಯ ಭಾಗವತರು (ಯಕ್ಷಧ್ವನಿ), ಸಹನಾ ಭಟ್ಟ (ರಸಧ್ವನಿ), ವಿದ್ವಾನ್ ಎನ್.ಜಿ.ಹೆಗಡೆ (ತಬಲ), ಶಿವರಾಮ ಭಾಗವತರು (ಗಾನಸಿರಿ), ತ್ರಿವೇದಿ ಎನ್.ವಾಸುದೇವ ಭಟ್ಟ (ವ್ಯಾಖ್ಯಾನ), ಸತೀಶ್ ಯಲ್ಲಾಪುರ (ಚಿತ್ರ ಪ್ರಾತ್ಯಕ್ಷಿಕೆ) ಅವರು ಕಾರ್ಯಕ್ರಮ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.