
ಮೈಸೂರು: ಮರ್ಯಾದೆಗೇಡು ಹತ್ಯೆಗೆ ಕಠಿಣ ಕಾಯ್ದೆ ರೂಪಿಸಲು ಆಗ್ರಹಿಸಿ ಸಂಶೋಧಕರ ಸಂಘದ ಸದಸ್ಯರು ಮಾನಸಗಂಗೋತ್ರಿಯ ಮುಖ್ಯಗ್ರಂಥಾಲಯದ ಎದುರು ಶನಿವಾರ ಸಹಿ ಸಂಗ್ರಹ ಅಭಿಯಾನ ನಡೆಸಿದರು.
ಸಂಘದ ಅಧ್ಯಕ್ಷ ವರಹಳ್ಳಿ ಆನಂದ ಮಾತನಾಡಿ, ‘ಮರ್ಯಾದೆಯ ಹೆಸರಿನಲ್ಲಿ ಪ್ರತಿವರ್ಷ ಪ್ರಪಂಚದಲ್ಲಿ ಸುಮಾರು 5 ಸಾವಿರಕ್ಕಿಂತ ಹೆಚ್ಚು ಮಹಿಳೆಯರ ಹತ್ಯೆ ನಡೆಯುತ್ತಿವೆ ಎಂಬುದಾಗಿ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (ಯುಎನ್ಎಫ್ಪಿಐ) ತನ್ನ ವರದಿಯಲ್ಲಿ ಹೇಳಿದೆ. ಈಚೆಗೆ ಹುಬ್ಬಳ್ಳಿಯಲ್ಲಿ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಗರ್ಭಿಣಿಯನ್ನು ತಂದೆಯೇ ಹತ್ಯೆ ಮಾಡಿದ್ದು ಅಮಾನವೀಯ’ ಎಂದರು.
‘ಜಾತಿ ಕಾರಣಕ್ಕಾಗಿ ಸಮಾಜ ಸಂವೇದನೆ ಕಳೆದುಕೊಂಡಿದೆ. ಇದು ಹೀಗೆಯೇ ಮುಂದುವರಿದರೆ, ಜಾತಿ ಇನ್ನಷ್ಟು, ಕಠಿಣಗೊಂಡು ಸಮಾಜವನ್ನು ಹಾಳುಗೆಡವುತ್ತದೆ. ಕೊಲೆ, ಶೋಷಣೆ ಹೆಚ್ಚಾಗುತ್ತದೆ. ರಾಜ್ಯ ಸರ್ಕಾರ ಮರ್ಯಾದೆಗೇಡು ಹತ್ಯೆಗೂ ಕಾನೂನು ರಚಿಸಬೇಕು’ ಎಂದು ಒತ್ತಾಯಿಸಿದರು.
ಸಿಂಡಿಕೇಟ್ ಸದಸ್ಯ ನಟರಾಜ್ ಶಿವಣ್ಣ, ಸಂಶೋಧಕರ ಸಂಘದ ಉಪಾಧ್ಯಕ್ಷ ಮಲ್ಲೇಶ್ ಬಾಚಹಳ್ಳಿ, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಗಜೇಂದ್ರ ಚಿನ್ನಸ್ವಾಮಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.