
ಹುಣಸೂರು: ‘ಮರದೂರಿನಲ್ಲಿ ನೆಲೆಸಿರುವ ಅಲೆಮಾರಿ ಸಮುದಾಯಕ್ಕೆ ಸೇರಿದ ದೊಂಬರಿಗೆ ಮೂಲ ಸವಲತ್ತು ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕು ನಡೆಸಿದ್ದಾರೆ’ ಎಂದು ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಗಮನಕ್ಕೆ ತಂದರು.
ಮರದೂರು ಗ್ರಾಮ ವ್ಯಾಪ್ತಿಯಲ್ಲಿ ನೆಲೆ ಕಟ್ಟಿಕೊಂಡಿರುವ 30 ದೊಂಬಿದಾಸ ಸಮುದಾಯದ ಕುಟುಂಬಗಳಿಗೆ ಹಲವು ವರ್ಷಗಳಿಂದ ಸರ್ಕಾರಿ ಸವಲತ್ತು, ಮನೆ ಇಲ್ಲದೆ ಬಯಲಿನಲ್ಲಿ ಗುಡಿಸಲು ಕಟ್ಟಿಕೊಂಡು ಬದುಕು ನಡೆಸಿದ್ದಾರೆ. ಈ ಸಮುದಾಯದವರ ಅಭಿವೃದ್ಧಿಗೆ ಸರ್ಕಾರ ಅಲೆಮಾರಿ ನಿಗಮ ಮಂಡಳಿ ಸ್ಥಾಪಿಸಿದ್ದು, ನಿಗಮ ಮಂಡಳಿ ಗಮನಕ್ಕೆ ತಂದು ವಿಶೇಷ ಅನುದಾನಕ್ಕೆ ತಾ.ಪಂ ಅಧಿಕಾರಿಗಳು ವರದಿ ಸಲ್ಲಿಸಿ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಕಾಲೊನಿ ವೀಕ್ಷಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಮಾತನಾಡಿ, ಅಲೆಮಾರಿ ನಿಗಮ ಮಂಡಳಿ ಅಧ್ಯಕ್ಷರಿಗೆ ತಾ.ಪಂ ಕಚೇರಿಯಿಂದ ದೊಂಬರ ಕಾಲೊನಿ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಪತ್ರ ಬರೆದು ಮನವಿ ಮಾಡಲಿದ್ದೇವೆ. ಈಗಾಗಲೇ ವಸತಿ ಯೋಜನೆಯಲ್ಲಿ ಆಯ್ಕೆಗೊಂಡ 5 ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಿ, ಗ್ರಾಮದವರಿಗೆ 30 ಗುಂಟೆ ನಿವೇಶನ ಸ್ಮಶಾನಕ್ಕೆ ಕಾದಿಡುವ ಬಗ್ಗೆ ಸಂಬಂಧಿಸಿದ ಪಿಡಿಒ ಗಮನಕ್ಕೆ ತರಲಾಗುವುದು. ಪಂಚಾಯಿತಿಯಿಂದ ಕಾಲೊನಿಗೆ ಬೀದಿ ದೀಪ ಅಳವಡಿಸಲು ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭರತ್, ಪಿಡಿಒ ಧರ್ಮೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.