ADVERTISEMENT

ಹುಣಸೂರು: ಹನಗೋಡು ಸರ್ಕಾರಿ ಶಾಲೆಯಲ್ಲಿ ಪ್ರಯೋಗಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 12:33 IST
Last Updated 10 ಮಾರ್ಚ್ 2025, 12:33 IST
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ಕೇಂದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ವಿಜ್ಞಾನ ಮೇಳ ಮತ್ತು ಪ್ರಯೋಗಾಲಯವನ್ನು ವೈದ್ಯ ಡಾ.ಚಿರಂಜೀವಿ ಉದ್ಘಾಟಿಸಿ ವಿಜ್ಞಾನ ಮಾದರಿ ವೀಕ್ಷಿಸಿದರು
ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ಕೇಂದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ವಿಜ್ಞಾನ ಮೇಳ ಮತ್ತು ಪ್ರಯೋಗಾಲಯವನ್ನು ವೈದ್ಯ ಡಾ.ಚಿರಂಜೀವಿ ಉದ್ಘಾಟಿಸಿ ವಿಜ್ಞಾನ ಮಾದರಿ ವೀಕ್ಷಿಸಿದರು   

ಹುಣಸೂರು: ವೈಜ್ಞಾನಿಕ ಮನೋಭಾವನೆ ಬೆಳೆಸುವ ದಿಕ್ಕಿನಲ್ಲಿ ಶೈಕ್ಷಣಿಕ ಚಟುವಟಿಕೆ ಹಮ್ಮಿಕೊಳ್ಳುವುದರಿಂದ ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಮೂಡಲಿದೆ ಎಂದು ಇಲವಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಚಿರಂಜೀವಿ ಹೇಳಿದರು.

ತಾಲ್ಲೂಕಿನ ಹನಗೋಡು ಹೋಬಳಿ ಕೇಂದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ಪ್ರಯೋಗಾಲಯ ಹಾಗೂ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಪ್ರಾಥಮಿಕ ಹಂತದಿಂದಲೇ ಮಕ್ಕಳ ಮಾನಸಿಕ ಸ್ಥಿತಿಗತಿಯನ್ನು ಅವಲೋಕಿಸಿ ಮಗುವಿನ ಆಸಕ್ತಿ ಗಮನಿಸಿ, ಆ ಕ್ಷೇತ್ರದಲ್ಲಿ ಒತ್ತು ನೀಡಿ ಕಲಿಕೆಗೆ ಅವಕಾಶ ಕಲ್ಪಿಸುವುದರಿಂದ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದರು.

ಮಕ್ಕಳು ಏನೇ ಕಲಿತರು ಸಂತೋಷದಿಂದ ಮನಃಪೂರ್ವಕವಾಗಿ ತೊಡಗಿ ಕಲಿಯುವುದರಿಂದ ಶಾಶ್ವತವಾಗಿ ಮನಸ್ಸಿನಲ್ಲಿ ಉಳಿದು ಭವಿಷ್ಯದ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಒತ್ತಡದ ಕಲಿಕೆ ವಿದ್ಯಾರ್ಥಿಯ ಬೆಳವಣಿಗೆಗೆ ತಾತ್ಕಾಲಿಕವಾಗಿ ಸಹಾಯಕ್ಕೆ ಬಂದರೂ, ಶಾಶ್ವತವಾಗಿ ಉಳಿಯುವುದು ಕಡಿಮೆ ಎಂಬುದು ಹಲವು ಸಂಶೋಧನೆಯಿಂದ ತಿಳಿದು ಬಂದಿದೆ ಎಂದರು.

ADVERTISEMENT

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ಪರ್ಧೆ ನೀಡುವಷ್ಟು ಕೌಶಲ ಹೊಂದಿದ್ದು, ಇಂದಿನ ಮಾಹಿತಿ ತಂತ್ರಜ್ಞಾನ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರುವಲ್ಲಿ ಸಫಲವಾಗಿದೆ. ಸ್ಮಾರ್ಟ್ ಕ್ಲಾಸ್ ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಕಾಲವೊಂದಿತ್ತು, ಇತ್ತೀಚಿನ ದಿನದಲ್ಲಿ ಕಾಡಂಚಿನ ಶಾಲೆಯಲ್ಲೂ ಸ್ಮಾರ್ಟ್ ಕ್ಲಾಸ್ ಕಾಣುವಷ್ಟು ಅಭಿವೃದ್ಧಿ ಹೊಂದಿದ್ದೇವೆ ಎಂದರು.

ಮಾದರಿ: ಶಾಲೆಯ ಮುಖ್ಯಶಿಕ್ಷಕ ಸಂತೋಷ್ ಕುಮಾರ್ ಮಾತನಾಡಿ, ಶಾಲೆಯ ವಿದ್ಯಾರ್ಥಿಗಳು ವಿಜ್ಞಾನ ದಿನದ ಅಂಗವಾಗಿ ಸ್ಥಳೀಯವಾಗಿ ಲಭ್ಯವಿರುವ ವಸ್ತು ಬಳಸಿ ವಿಜ್ಞಾನ ಮಾದರಿಯನ್ನು ಸಿದ್ಧಪಡಿಸಿ ಅದರ ಕಾರ್ಯವೈಖರಿ ವಿವರಿಸುವ ತಿಳಿಸುವಷ್ಟು ಪ್ರಬುದ್ಧತೆ ಬೆಳೆದಿರುವುದು ಆಧುನಿಕ ಶಿಕ್ಷಣ ವ್ಯವಸ್ಥೆಗೆ ಕೈಗನ್ನಡಿ ಎಂದರು.

ಕಾರ್ಯಕ್ರಮದಲ್ಲಿ ವಿಜ್ಞಾನ ನೋಡಲ್‌ ಅಧಿಕಾರಿ ಜಯಂತಿ ಮಾತನಾಡಿದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಉತ್ತಮ ಮಾದರಿಗೆ 10ನೇ ತಗರತಿಯ ವರ್ಷೀತ್ ಮತ್ತು ತಂಡಕ್ಕೆ ಪ್ರಥಮ ಬಹುಮಾನ, 8ನೇ ತರಗತಿಯ ವರ್ಷಿಣಿ ಮತ್ತು ತಂಡಕ್ಕೆ ದ್ವಿತೀಯ, ತೃತೀಯ ಬಹುಮಾನ 9ನೇ ತರಗತಿಯ ಭೂಮಿಕ ಮತ್ತು ತಂಡದ ಪಾಲಾಯಿತು.

ಕಾರ್ಯಕ್ರಮದಲ್ಲಿ ಧರ್ಮವಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮುರಳೀಧರ್, ತಾಲ್ಲೂಕು ಯೋಜನಾಧಿಕಾರಿ ನಾರಾಯಣಶೆಟ್ಟಿ, ದಾ.ರಾ.ಮಹೇಶ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೃಷ್ಣೇಗೌಡ ಪೋಷಕರು ಮತ್ತು ಶಿಕ್ಷಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.