ಹುಣಸೂರು: ತಾಲ್ಲೂಕಿನ ಅತಿ ದೊಡ್ಡ ಕೆರೆಯಲ್ಲಿ ಒಂದಾಗಿರುವ ಹೈರಿಗೆ ಕೆರೆ ನಿರ್ವಹಣೆ ಸಮರ್ಪಕವಾಗಿಲ್ಲದೆ ಎಡ ಮತ್ತು ಬಲದಂಡೆ ನಾಲೆ ಶಿಥಿಲವಾಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ಸಮಸ್ಯೆ ಎದುರಾಗಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ತಾಲ್ಲೂಕಿನ ಹನಗೋಡು ಹೋಬಳಿ ಹೈರಿಗೆ ಕೆರೆ ಎಡ ಮತ್ತು ಬಲದಂಡೆ ನಾಲೆ ದುರಸ್ಥಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹೈರಿಗೆ ಕೆರೆ ಅತಿ ದೊಡ್ಡಕೆರೆಗಳಲ್ಲಿ ಒಂದಾಗಿದ್ದು, ಈ ಕೆರೆಗೆ ಹೊಂದಿಕೊಂಡಿರುವ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಹರಿಸಲು ನಾಲೆ ಸಮರ್ಪಕವಾಗಿಲ್ಲದೆ ನೀರು ವ್ಯರ್ಥವಾಗುತ್ತಿದೆ. ರೈತರ ಒಳಿತಿಗಾಗಿ ನಾಲೆ ದುಸ್ತಿಗೆ ₹2 ಕೋಟಿ ಅನುದಾನ ಬಳಸಿ ರೈತರಿಗೆ ಕೆರೆ ನೀರು ಮುಂದಿನ ಸಾಲಿನಲ್ಲಿ ಹರಿಸಲಾಗುವುದು ಎಂದರು.
ಹಾರಂಗಿ ಮತ್ತು ಸಣ್ಣ ನೀರಾವರಿ ಇಲಾಖೆಗೆ ನಾಲೆ ನಿರ್ವಹಣೆಗೆ ಅನುದಾನ ನೀಡುತ್ತಿದ್ದು, ಆ ಹಣ ಎಲ್ಲಿಗೆ ಬಳಕೆಯಾಗಿದೆ ? ನಾಲೆ ನಿರ್ವಹಣೆ ಕುರಿತು ರೈತರಿಂದ ದೂರು ನಿರಂತರವಾಗಿ ಎದುರಾಗುತ್ತಿದೆ ಎಂದು ಸಭೆಯಲ್ಲಿದ್ದ ಎಂಜಿನಿಯರ್ ಅವರನ್ನು ಪ್ರಶ್ನಿಸಿದರು.
ಹನಗೋಡು ಹೋಬಳಿ ಭಾಗದಲ್ಲಿ ಹಾರಂಗಿ ನಾಲೆ ಎರಡು ವರ್ಷದ ಹಿಂದೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ದುರಸ್ತಿಗೊಂಡಿದ್ದು, ಈಗ ನಾಲೆ ಗೋಡೆಗಳು ಕುಸಿದಿದೆ. ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲದೆ ತಾತ್ಕಾಲಿಕ ಕೆಲಸ ನಿರ್ವಹಿಸುವುದರಿಂದ ಸರ್ಕಾರದ ಖಾಜಾನೆ ಖಾಲಿ ಆಗುತ್ತದೆ. ಸಾರ್ವಜನಿಕರಿಗೆ ಅನುಕೂಲ ಆಗದು ಎಂದರು.
ತುಂಡು ಗುತ್ತಿಗೆ: ಕಾಮಗಾರಿ ಗುತ್ತಿಗೆ ಪಡೆಯುವ ಗುತ್ತಿಗೆದಾರರು ಖುದ್ದು ಕೆಲಸ ನಿರ್ವಹಿಸದೆ, ತುಂಡು ಗುತ್ತಿಗೆ ನೀಡುವುದರಿಂದ ಗುಣಮಟ್ಟದ ಕಾಮಗಾರಿ ನಿರೀಕ್ಷೆ ಸಾಧ್ಯವಿಲ್ಲ. ಹೊರ ಜಿಲ್ಲೆಯ ಗುತ್ತಿಗೆದಾರ ಸ್ಥಳಕ್ಕೆ ಬಂದು ಕಾಮಗಾರಿ ಪರಿಶೀಲಿಸುವ ಮನಸ್ಥಿತಿ ಇತ್ತೀಚಿಗೆ ಇಲ್ಲ. ಎಂಜಿನಿಯರಿಂಗ್ ವಿಭಾಗದ ಸಿಬ್ಬಂದಿ ಗುತ್ತಿಗೆದಾರರನ್ನು ಪ್ರಶ್ನಿಸುವ ಅಥವಾ ಕಾಮಗಾರಿ ಪರಿಶೀಲಿಸುವ ಗೋಜಿಗೆ ಹೋಗದ ಕಾರಣ ಗುಣಮಟ್ಟ ಇಲ್ಲದ ಕೆಲಸ ನಡೆಯುತ್ತಿವೆ ಎಂದು ಗುಡುಗಿದರು.
ಅಚ್ಚುಕಟ್ಟು ಪ್ರದೇಶದ ರೈತರು ನಾಲೆ ಕಾಮಗಾರಿ ಮತ್ತು ನೀರು ಹರಿಯದ ಬಗ್ಗೆ ಶಾಸಕರ ಗಮನ ಸೆಳೆದರು.
ಪಂಚಾಯಿತಿ ಅಧ್ಯಕ್ಷ ರವಿ, ಎಇಇ ಮೋಹನ್ ಕುಮಾರ್, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಶ್ರೀನಿವಾಸ ಗೌಡ,ರಾಜೇಗೌಡ, ಹೆಗ್ಗಂದೂರು ಶಿವಕುಮಾರ್, ತಟ್ಟೆಕೆರೆ ಶ್ರೀನಿವಾಸ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.