ADVERTISEMENT

ಚೆಲುವಾಂಬ ಆಸ್ಪತ್ರೆಯಲ್ಲಿ ಐಸಿಯು ಘಟಕ ನಿರ್ಮಾಣ: ಶಾಸಕ ಕೆ.ಹರೀಶ್‌ ಗೌಡ

ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಶಾಸಕ ಕೆ.ಹರೀಶ್‌ ಗೌಡ ಸಭೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:44 IST
Last Updated 4 ಮಾರ್ಚ್ 2026, 5:44 IST
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂಸ್ಥೆಯ ಅಧೀನಕ್ಕೆ ಒಳಪಡುವ ಆಸ್ಪತ್ರೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ. ಹರೀಶ್ ಗೌಡ ಮಾತನಾಡಿದರು - ಪ್ರಜಾವಾಣಿ ಚಿತ್ರ
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂಸ್ಥೆಯ ಅಧೀನಕ್ಕೆ ಒಳಪಡುವ ಆಸ್ಪತ್ರೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ. ಹರೀಶ್ ಗೌಡ ಮಾತನಾಡಿದರು - ಪ್ರಜಾವಾಣಿ ಚಿತ್ರ   

ಮೈಸೂರು: ‘ಚೆಲುವಾಂಬ ಆಸ್ಪತ್ರೆಯಲ್ಲಿ ತಾಯಿ, ಮಗುವಿನ ಸುರಕ್ಷತೆಗೆ ₹ 56 ಲಕ್ಷ ವೆಚ್ಚದಲ್ಲಿ ಐಸಿಯು ಘಟಕ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ’ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂಸ್ಥೆಯ ಅಧೀನಕ್ಕೆ ಒಳಪಡುವ ಆಸ್ಪತ್ರೆಗಳ ಪ್ರಗತಿಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ತಾಯಿ- ಮಗು ಮರಣ ಪ್ರಮಾಣ ತಡೆಯುವಲ್ಲಿ ಚೆಲುವಾಂಬ ಆಸ್ಪತ್ರೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಮರಣ ‍ಪ್ರಮಾಣ ಶೂನ್ಯಕ್ಕೆ ತರಲು ಬೇಕಾದ ಅನುಕೂಲ ಕಲ್ಪಿಸಲಾಗುವುದು. ನೆಫ್ರೋ ಯುರಾಲಜಿ, ಎಂಡೋ ನೆಫ್ರೋಲಾಜಿ ಘಟಕದ ಕಟ್ಟಡವು ಎರಡು- ಮೂರು ತಿಂಗಳಲ್ಲಿ ಪೂರ್ಣವಾಗಲಿದೆ. ಇದನ್ನು ಆರಂಭಿಸಿದರೆ ಆಯಾಯ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ಶುರುವಾಗಲಿದೆ’ ಎಂದರು.

ADVERTISEMENT

‘ಕೆ.ಆರ್.ಆಸ್ಪತ್ರೆಯ ಎಂಆರ್‌ಐ ಕೇಂದ್ರದ ಒತ್ತಡ ತಗ್ಗಿಸಲು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಎಂಆರ್‌ಐ ಯಂತ್ರ ಅಳವಡಿಸಲಾಗುತ್ತಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್‌ ಸಿಎಸ್‌ಆರ್‌ ನಿಧಿಯಿಂದ ₹ 8 ಕೋಟಿ ವೆಚ್ಚದ ಉಪಕರಣ ನೀಡುತ್ತಿದೆ. ಇದು ಆರಂಭವಾದರೆ ಎರಡೂ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳಿಗೆ ಸ್ಕ್ಯಾನಿಂಗ್ ಮಾಡಲು ಹೊರಗಡೆ ಹೋಗುವುದು ತಪ್ಪಲಿದೆ’ ಎಂದು ಹೇಳಿದರು.

‘ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಭದ್ರತಾ ಸಿಬ್ಬಂದಿಯಲ್ಲಿ ಮಹಿಳಾ ಭದ್ರತಾ ಸಿಬ್ಬಂದಿಯನ್ನು ಹೆಚ್ಚು ನೇಮಕ ಮಾಡಿಕೊಂಡಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು, ಏಜೆನ್ಸಿಯ ಮುಖ್ಯಸ್ಥರೊಂದಿಗೆ ಚರ್ಚಿಸಿ, ಪುರುಷರ ಪ್ರಮಾಣವನ್ನು ಹೆಚ್ಚಿಸಲು ಸೂಚಿಸಲಾಗಿದೆ. ಕೆ.ಆರ್‌. ಆಸ್ಪತ್ರೆಗೆ ಒಂದೇ ಕಡೆಯಿಂದ ಪ್ರವೇಶ ಒದಗಿಸಿ, ಬರುವವರ ಮಾಹಿತಿ ಪಡೆಯಲು ವ್ಯವಸ್ಥೆ ಮಾಡಲಿದ್ದೇವೆ’ ಎಂದು ತಿಳಿಸಿದರು.

‘ಆಸ್ಪತ್ರೆ ಆವರಣದಲ್ಲಿ ಹೊರಗಡೆಯವರು ಬಂದು ಮಲಗಿರುತ್ತಾರೆ. ಅದನ್ನು ತಪ್ಪಿಸಲು ಕ್ರಮ ವಹಿಸುವಂತೆ ಸೂಚಿಸಿದ್ದೇನೆ. ಡಿ ಗ್ರೂಪ್ ನೌಕರರು ರೋಗಿಗಳ ಸಂಬಂಧಿಕರಿಂದ ಹಣ ಪಡೆಯುವುದಕ್ಕೂ ಕಡಿವಾಣ ಹಾಕಿ ಎಚ್ಚರಿಕೆ ನೀಡಲಾಗಿದೆ. ಶುಶ್ರೂಷಕಿಯರು ಇಲ್ಲದ ಸಮಯದಲ್ಲಿ ಡಿ ಗ್ರೂಪ್ ಸಿಬ್ಬಂದಿ ಬಳಸಿಕೊಂಡು ರೋಗಿಗಳಿಗೆ ಸಹಾಯ ಮಾಡಬೇಕು. ಆದರೆ, ಯಾರಿಂದಲೂ ಹಣ ಪಡೆಯದಂತೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ. ಒಂದು ವೇಳೆ ಅಂತಹ ಪ್ರಕರಣಗಳು ನಡೆದು ಸಿಕ್ಕಿಬಿದ್ದರೆ ಅಂತಹವರ ಮೇಲೆ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

‘ಮೈಸೂರಿನಲ್ಲಿ ಕಿಡ್ನಿ ಸ್ಟೋನ್ ಲೇಸರ್ ಚಿಕಿತ್ಸೆಗೆ ಹೊರಗೆ ಹೋಗಬೇಕಿತ್ತು, ಈಗ ಸುಸಜ್ಜಿತ ಶಸ್ತ್ರಚಿಕಿತ್ಸೆ ಆರಂಭಿಸಲಾಗಿದೆ. ಕೆ.ಆರ್.ಆಸ್ಪತ್ರೆಯಲ್ಲೇ ಲೇಸರ್ ಶಸ್ತ್ರಚಿಕಿತ್ಸೆ ಶುರು ಮಾಡಿರುವುದರಿಂದ ರೋಗಿಗಳಿಗೆ ಸಹಾಯಕವಾಗಲಿದೆ’ ಎಂದರು.

ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯರಾದ ಡಾ. ಕೆ.ಮಹದೇವ್, ತನುಜಾ ಮಹೇಶ್, ಡಾ.ಸುನಿಲ್, ಡೀನ್‌ ಕೆ.ಆರ್‌.ದಾಕ್ಷಾಯಿಣಿ, ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಎಂ.ಎಸ್.ಶೋಭಾ, ಮುಖ್ಯ ಆಡಳಿತಾಧಿಕಾರಿ ಮಹೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.