ADVERTISEMENT

ಐರ್ಲೆಂಡ್‌ನಲ್ಲಿ ಮೈಸೂರಿನ ಮೂವರ ಹತ್ಯೆ

ಮೃತದೇಹಗಳ ಹಸ್ತಾಂತರಕ್ಕೆ ಸಂಬಂಧಿಕರ ಮನವಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 12:46 IST
Last Updated 31 ಅಕ್ಟೋಬರ್ 2020, 12:46 IST
ಐರ್ಲೆಂಡಿನಲ್ಲಿ ಕೊಲೆಯಾದ ಸೀಮಾಬಾನು ಮತ್ತು ಅವರ ಮಕ್ಕಳು
ಐರ್ಲೆಂಡಿನಲ್ಲಿ ಕೊಲೆಯಾದ ಸೀಮಾಬಾನು ಮತ್ತು ಅವರ ಮಕ್ಕಳು   

ಬೆಟ್ಟದಪುರ: ಇಲ್ಲಿಗೆ ಸಮೀಪದ ಹಲಗನಹಳ್ಳಿಯ ಸೀಮಾಬಾನು (37), ಪುತ್ರಿ ಅಶ್ರಿರಾ ಸೈಯ್ಯದ್ (11) ಹಾಗೂ ಪುತ್ರ ಫೈಜ್ಹಾನ್ ಸೈಯ್ಯದ್ (6) ಇವರನ್ನು ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಕೊಲೆ ಮಾಡಲಾಗಿದೆ. ಮೃತದೇಹಗಳನ್ನು ಹಸ್ತಾಂತರಿಸಬೇಕು ಎಂದು ಸಂಬಂಧಿಕರು ಮನವಿ ಮಾಡಿದ್ದಾರೆ.

ಸೀಮಾಬಾನು 13 ವರ್ಷಗಳ ಹಿಂದೆ ಮೈಸೂರಿನ ರಾಜೀವ್‌ನಗರದಲ್ಲಿ ವಾಸವಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಸಯ್ಯದ್ ಸಮೀರ್ ಎಂಬುವವರನ್ನು ವಿವಾಹವಾಗಿ ಇವರೊಂದಿಗೆ ಐರ್ಲೆಂಡ್‌ಗೆ ತೆರಳಿದ್ದರು.

‘ಆಸ್ತಿಯ ವಿಚಾರಕ್ಕೆ ಪತಿಯೊಂದಿಗೆ ಉಂಟಾದ ಕಲಹದಿಂದ ಬೇಸರಗೊಂಡು ಭಾರತಕ್ಕೆ ವಾಪಸ್ ಬಂದಿದ್ದರು. ನಂತರ ಫೆಬ್ರುವರಿಯಲ್ಲಿ ಮತ್ತೆ ಪತಿಯೊಂದಿಗೆ ಐರ್ಲೆಂಡಿಗೆ ತೆರಳಿದ್ದರು. ಮೇ ತಿಂಗಳಿನಲ್ಲಿ ಪತಿ ವಿರುದ್ಧ ಇವರು ಅಲ್ಲಿನ ಪೊಲೀಸರಿಗೆ ದೌರ್ಜನ್ಯ ಎಸಗಿದ ಕುರಿತು ದೂರು ನೀಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಇಬ್ಬರನ್ನು ಪ್ರತ್ಯೇಕವಾಗಿರಿಸಿತ್ತು. ದೌರ್ಜನ್ಯ ಕುರಿತು ತೀರ್ಪು ಹೊರಬರುವುದಕ್ಕೆ ಕೆಲವೇ ದಿನಗಳು ಇರುವಂತೆ ಕೊಲೆಯಾಗಿದೆ’ ಎಂದು ಸೀಮಾಬಾನು ಸೋದರ ಮೊಹಮ್ಮದ್ ಘಸನ್ ಪುತ್ರ ಅಬು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸ್ವಲ್ಪದಿನಗಳ ಹಿಂದೆಯಷ್ಟೇ ಸೀಮಾಬಾನು ವಿಡಿಯೊ ಕಾಲ್ ಮಾಡಿ ಪತಿ ತನ್ನನ್ನು ಉಳಿಸುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದರು. ಅ.25ರಿಂದ ಯಾವುದೇ ಕರೆ ಬಂದಿಲ್ಲ. 28ರಂದು ಕೊಲೆಯಾಗಿರುವ ವಿಚಾರ ಗೊತ್ತಾಯಿತು. ಈಗ ಮೃತದೇಹಗಳನ್ನು ನಮಗೆ ಹಸ್ತಾಂತರಿಸಬೇಕು. ಕೊಲೆಗಾರರನ್ನು ಪತ್ತೆ ಮಾಡಿ ಶಿಕ್ಷೆ ವಿಧಿಸಬೇಕು’ ಎಂದು ಸೀಮಾಬಾನು ಸೋದರ ಮೊಹಮ್ಮದ್ ಘಸನ್ ಮನವಿ ಮಾಡಿದರು.

ಘಟನೆ ನಡೆದಿರುವ ಕುರಿತು ಮಾಹಿತಿ ಬಂದಿದೆ. ಆದರೆ, ಮುಂದಿನ ಕ್ರಮಗಳನ್ನು ವಿದೇಶಾಂಗ ಇಲಾಖೆ ಕೈಗೊಳ್ಳಬೇಕಿದೆ ಎಂದು ಪಿರಿಯಾಪಟ್ಟಣ ಡಿವೈಎಸ್‌ಪಿ ಸುಂದರ್‌ರಾಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.