ಮೈಸೂರು: ಹಾಸನದಲ್ಲಿ ಹೃದಯಾಘಾತ ಪ್ರಕರಣಗಳ ಹೆಚ್ಚಳ ಜನರಲ್ಲಿ ಆತಂಕ ಮೂಡಿಸಿದ್ದು, ಇಲ್ಲಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ತಪಾಸಣೆಗೆ ಬರುವವರ ಸಂಖ್ಯೆ ದಿಢೀರ್ ದ್ವಿಗುಣಗೊಂಡಿದೆ.
ವಾರದ ಹಿಂದಷ್ಟೇ ಈ ಆಸ್ಪತ್ರೆಗೆ ನಿತ್ಯ ಹೊರರೋಗಿಗಳ ಸಂಖ್ಯೆ 600–700 ಇತ್ತಿ. 2–3 ದಿನಗಳಿಂದ 1000–1200 ಮಂದಿಗೆ ಏರಿಕೆಯಾಗಿದೆ. ಅದರಲ್ಲೂ ಹಾಸನ ಜಿಲ್ಲೆಯಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ. ಯುವಜನರು ಆತಂಕದಿಂದ ಬರುತ್ತಿದ್ದಾರೆ ಎಂದು ಇಲ್ಲಿನ ವೈದ್ಯರು ಹೇಳುತ್ತಾರೆ.
ಹೊರರೋಗಿಗಳ ವಿಭಾಗದಲ್ಲಿ ತಪಾಸಣೆಗಾಗಿ ಮುಂಜಾನೆ 5ರಿಂದಲೇ ಜನ ಸರದಿ ಸಾಲಿನಲ್ಲಿ ಕಾಯತೊಡಗುತ್ತಿದ್ದಾರೆ. ‘ಮೊದಲು ಬಂದವರ’ನ್ನು ಪರಿಗಣಿಸಿ ನಿತ್ಯ 2 ವಿಭಾಗದಲ್ಲಿ ಸೀಮಿತ ಮಂದಿಗಷ್ಟೇ ಟೋಕನ್ ನೀಡಿ ತಪಾಸಣೆ ಮಾಡಲಾಗುತ್ತಿದೆ. ಸಂಪನ್ಮೂಲ ಮತ್ತು ಸಿಬ್ಬಂದಿ ಕೊರತೆ ಕಾರಣಕ್ಕೆ ಎಲ್ಲರಿಗೂ ಸಕಾಲಕ್ಕೆ ಸೇವೆ ಸಾಧ್ಯವಾಗುತ್ತಿಲ್ಲ.
ಜಿಲ್ಲೆಯೊಂದಿಗೆ ನೆರೆಯ ಹಾಸನ, ಚಾಮರಾಜನಗರ, ಮಂಡ್ಯ, ಕೊಡಗು, ರಾಮನಗರ ಜಿಲ್ಲೆಗಳಿಂದಲೂ ರೋಗಿಗಳು ತಪಾಸಣೆ ಮತ್ತು ಚಿಕಿತ್ಸೆಗೆ ಬರುತ್ತಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಜನಸಂದಣಿ ಸಾಮಾನ್ಯವಾಗಿದೆ.
‘ಹಾಸನದ ಸುದ್ದಿ ಯುವಜನರಲ್ಲಿ ತಲ್ಲಣ ಮೂಡಿಸಿದೆ. ಚಲನಚಿತ್ರ ನಟ ಪುನೀತ್ ರಾಜಕುಮಾರ್ ಮೃತಪಟ್ಟ ಸಂದರ್ಭದಲ್ಲೂ ಕೆಲವು ತಿಂಗಳು ಹೀಗೆಯೇ ಆಗಿತ್ತು. ಆದರೆ ಹೀಗೆ ಆತಂಕದಿಂದ ತಪಾಸಣೆಗೆ ಬರುತ್ತಿರುವ ಯುವಜನರಲ್ಲಿ ಹೆಚ್ಚಿನವರಿಗೆ ಯಾವುದೇ ಸಮಸ್ಯೆ ಇಲ್ಲ. ಸಾವಿನ ಪ್ರಕರಣ ಕೇವಲ ಹಾಸನದಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ವರದಿ ಆಗುತ್ತಿವೆ’ ಎನ್ನುತ್ತಾರೆ ಮೈಸೂರಿನ ಜಯದೇವ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಕೆ.ಎಸ್. ಸದಾನಂದ.
‘ಒತ್ತಡ, ಜೀವನಶೈಲಿ ಹಾಗೂ ಆಹಾರ ಕ್ರಮದಲ್ಲಿನ ಬದಲಾವಣೆ, ಪರಿಸರ ಮಾಲಿನ್ಯ ಹೃದ್ರೋಗ ಸಮಸ್ಯೆ ಹೆಚ್ಚಳಕ್ಕೆ ಕಾರಣ. ಪ್ರತಿಯೊಬ್ಬರು ನಿಯಮಿತವಾಗಿ ತಪಾಸಣೆಗೆ ಒಳಗಾಗಬೇಕು’ ಎನ್ನುವುದು ಅವರ ಸಲಹೆ.
ಸಂಖ್ಯೆ ದ್ವಿಗುಣ: 2020ರಲ್ಲಿ ಆಸ್ಪತ್ರೆಯಲ್ಲಿ 1.17 ಲಕ್ಷ ಮಂದಿ ಹೊರರೋಗಿಗಳಾಗಿ ತಪಾಸಣೆ ಹಾಗೂ ಚಿಕಿತ್ಸೆಗೆ ಒಳಗಾಗಿದ್ದು, 2021ರಲ್ಲಿ 1.50 ಲಕ್ಷ, 2022ರಲ್ಲಿ 1.86 ಲಕ್ಷ, 2023ರಲ್ಲಿ 2.13 ಲಕ್ಷ ಹಾಗೂ 2024ರಲ್ಲಿ ಈ ಪ್ರಮಾಣವು 2.32 ಲಕ್ಷಕ್ಕೆ ಏರಿಕೆ ಆಗಿದೆ. ಈ ವರ್ಷ ಜೂನ್ವರೆಗೆ 1 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ.
ಒಳರೋಗಿಗಳ ಸಂಖ್ಯೆಯೂ ಕಳೆದ ಐದು ವರ್ಷದಲ್ಲಿ ದ್ವಿಗುಣವಾಗಿದೆ. 2020ರಲ್ಲಿ 10,601 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರೆ, 2024ರಲ್ಲಿ ಈ ಪ್ರಮಾಣವು 20,286ಕ್ಕೆ ಏರಿದೆ. ಈ ವರ್ಷವೂ ಈಗಾಗಲೇ 10 ಸಾವಿರಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದಿದ್ದಾರೆ.
ಹಾಸನ ಸರಣಿ ಹೃದಯಾಘಾತದಿಂದ ಆತಂಕ
ಭೇಟಿ ನೀಡುವವರಲ್ಲಿ ಯುವಜನರ ಸಂಖ್ಯೆ ಗಣನೀಯ ಏರಿಕೆ
ಈ ವರ್ಷ ಜೂನ್ವರೆಗೆ 1 ಲಕ್ಷಕ್ಕೂ ಅಧಿಕ ಮಂದಿ ಭೇಟಿ
ಹಾಸನದ ಸುದ್ದಿ ಕೇಳಿ ಕೆಲವು ದಿನದಿಂದ ಯುವಜನರು ಹೆಚ್ಚಾಗಿ ತಪಾಸಣೆಗೆ ಬರುತ್ತಿದ್ದು ಹೊರರೋಗಿಗಳ ಸಂಖ್ಯೆಯಲ್ಲಿ ಶೇ 30–35ರಷ್ಟು ಹೆಚ್ಚಳ ಆಗಿದೆಡಾ.ಕೆ.ಎಸ್. ಸದಾನಂದ ಮೆಡಿಕಲ್ ಸೂಪರಿಂಟೆಂಡೆಂಟ್ ಜಯದೇವ ಆಸ್ಪತ್ರೆ
ಈಚೆಗಷ್ಟೇ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಹೃದಯಾಘಾತದಿಂದ ಸಾವಿಗೀಡಾದ ಸುದ್ದಿ ಕೇಳಿ ಆಘಾತವಾಯಿತು. ಹೀಗಾಗಿ ಆತಂಕದಿಂದಲೇ ತಪಾಸಣೆಗೆ ಬಂದಿದ್ದೇನೆಶಶಾಂಕ್ ಖಾಸಗಿ ಕಂಪನಿ ಉದ್ಯೋಗಿ
ವೈದ್ಯರ ಕೊರತೆ
‘ಮೈಸೂರಿನ ಜಯುದೇವ ಆಸ್ಪತ್ರೆಯಲ್ಲಿ 55 ವೈದ್ಯರು 500ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಇನ್ನೂ 20ಕ್ಕೂ ಹೆಚ್ಚು ವೈದ್ಯರ ಅಗತ್ಯವಿದೆ. ಆಸ್ಪತ್ರೆಯ ಆಡಳಿತವು ಈಗಾಗಲೇ ಸರ್ಕಾರಕ್ಕೆ ನೇಮಕಾತಿ ಪ್ರಸ್ತಾವ ಸಲ್ಲಿಸಿದೆ’ ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.