
‘ಡಿಜಿಟಲ್ ಪರಿವರ್ತನೆ ಮತ್ತು ಸುಸ್ಥಿರ ಬೆಳವಣಿಗೆ: ಹಣಕಾಸು ವ್ಯವಸ್ಥೆಯ ಮರು ವಿನ್ಯಾಸ’ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣ
ಮೈಸೂರು: ‘ವಿಶ್ವದ ಕೃತಕ ಬುದ್ಧಿಮತ್ತೆ (ಎಐ) ಉದ್ಯಮಕ್ಕೆ ಭಾರತವೇ ಸಾರ್ವಭೌಮ ಆಗಬಲ್ಲುದು’ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ ಹೇಳಿದರು.
ಇಲ್ಲಿನ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗವು ಐಕ್ಯೂಎಸಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಡಿಜಿಟಲ್ ಪರಿವರ್ತನೆ ಮತ್ತು ಸುಸ್ಥಿರ ಬೆಳವಣಿಗೆ: ಹಣಕಾಸು ವ್ಯವಸ್ಥೆಯ ಮರು ವಿನ್ಯಾಸ’ ವಿಷಯ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನವನ್ನು ಭಾರತ ತನ್ನದೇ ಆದ ವಿಶಿಷ್ಟ ಹಾದಿಯಲ್ಲಿ ಬಳಸುತ್ತಿದೆ’ ಎಂದರು.
‘ಜಗತ್ತು ಇಂದು ತಂತ್ರಜ್ಞಾನದಲ್ಲಿ ನಾಗಲೋಟದಲ್ಲಿ ಮುನ್ನುಗ್ಗುತ್ತಿದೆ. ಅಂತೆಯೇ ಸೈಬರ್ ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ. ದೇಶದಲ್ಲಿ ಈ ಅಪರಾಧಗಳ ಸಂಖ್ಯೆ ಜಾಸ್ತಿಯಾಗಿದೆ. ಆದರೂ ಡಿಜಿಟಲ್ ಮಾಧ್ಯಮದ ಹಣಕಾಸು, ಆರ್ಥಿಕ ವ್ಯವಹಾರಗಳಲ್ಲಿ ನಾವು ಮುಂದಿದ್ದೇವೆ’ ಎಂದು ತಿಳಿಸಿದರು.
ಬೆಂಗಳೂರಿನ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹಣಕಾಸು ಮತ್ತು ಬಿಎಫ್ಎಸ್ಐ ವಿಭಾಗದ ಪ್ರಾಧ್ಯಾಪಕ ಕೆ.ವಿ. ಕಿರಣ್ಕುಮಾರ್, ‘ಭಾರತವು ಡಿಜಿಟಲ್ ಮಾಧ್ಯಮದಲ್ಲಿ ಅಭೂತಪೂರ್ವ ಬದಲಾವಣೆ ಹೊಂದುತ್ತಿದೆ. ಅದು ನಮಗೆ ಅನುಭವಕ್ಕೆ ಬಂದಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ‘ತಂತ್ರಜ್ಞಾನದ ಬೆಳವಣಿಗೆಗೆ ನಾವು ಸಕಾರಾತ್ಮಕವಾಗಿ ತೆರೆದುಕೊಳ್ಳಬೇಕು’ ಎಂದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಎಂ. ಪ್ರಭು ಸ್ವಾಗತಿಸಿದರು. ಧನುಷ್ ನಿರೂಪಿಸಿದರು. ಪ್ರಿಯಾಂಕಾ ಹಾಗೂ ಮೇಘನಾ ಹಾಡಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥ ಎನ್. ದಿಲೀಪ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.