
ಮೈಸೂರು: ‘ಭಾರತ ಇಂದು ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಇತರರನ್ನು ಅವಲಂಬಿಸುವ ಸ್ಥಿತಿಯಿಂದ ಹೊರ ಬಂದಿದೆ. ತಂತ್ರಜ್ಞಾನ ಹಾಗೂ ಕೃಷಿ ರಂಗದಲ್ಲಿ ಜಾಗತಿಕ ಮುಂಚೂಣಿಯತ್ತ ಸಾಗಿದೆ’ ಎಂದು ಕೃಷಿ ವಿಜ್ಞಾನಿ ವಸಂತಕುಮಾರ ತಿಮಕಾಪುರ ಹೇಳಿದರು.
ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಸಂಸ್ಥೆಯು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಕನಕದಾಸನಗರದ ಕ್ಯಾಂಪಸ್ನಲ್ಲಿ ಶನಿವಾರ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ, ಗಣಿತ, ರೊಬೊಟಿಕ್ಸ್ ಮತ್ತು ಸ್ಪೇಸ್ಲ್ಯಾಬ್ ಕುರಿತ ಮಾದರಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಿಂದೆ ಭಾರತ ಕೃಷಿ ಚಟುವಟಿಕೆಗಳಿಗೆ ಅವಶ್ಯವಿರುವ ಉಪಕರಣ ಹಾಗೂ ಔಷಧಗಳಿಗಾಗಿ ವಿದೇಶಗಳನ್ನೇ ಅವಲಂಬಿಸಿತ್ತು. ಆದರೆ, ಸುಧಾರಿತ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕೃಷಿ ಸಂಶೋಧನೆಗಳ ಪರಿಣಾಮ ಇಂದು ಕೃಷಿ ಸಾಮಗ್ರಿಗಳು, ಔಷಧಿಗಳು, ಕೃಷಿ ಉಪಕರಣಗಳನ್ನು ತಾನೇ ತಯಾರಿಸಿಕೊಳ್ಳುತ್ತಿದೆ. ಆದ್ದರಿಂದ ಬೆಳೆಯಲಾದ ಉತ್ಪನ್ನಗಳನ್ನು ವಿದೇಶಗಳಿಗೆ ಗಣನೀಯ ಪ್ರಮಾಣದಲ್ಲಿ ರಫ್ತು ಮಾಡುತ್ತಿದೆ’ ಎಂದರು.
ನೈಪುಣ್ಯ ಶಾಲೆಯ ವಿದ್ಯಾರ್ಥಿಗಳು ಮಾನವ ವಿಕಾಸದ ಹಂತಗಳನ್ನು ವಿವರಿಸುವ, ಹುಣ್ಣಿಮೆಯಿಂದ ಅಮಾವಾಸ್ಯೆಯ ಪರಿವರ್ತನೆಯ ಹಂತ, ಮಾನವನ ದೇಹದ ವಿವಿಧ ಅಂಗ, ಚಂದ್ರಯಾನ-2ರ ವಿಕ್ರಮ್ ಲಾಂಡರ್ ಮತ್ತು ಪ್ರಗ್ಯಾನ್ ರೋವರ್ ರಾಕೆಟ್, ಸೌರಮಂಡಲ, ಭೂಮಿಯ ಒಳಪದರ ಮತ್ತು ಹೊರಪದರಗಳನ್ನು ವಿವರಿಸುವುದು ಮೊದಲಾದ ಮಾದರಿಗಳನ್ನು ಪ್ರದರ್ಶಿಸಿ ವಿವರಣೆ ನೀಡಿದರು.
ಅತ್ಯುತ್ತಮ ಮಾದರಿಗಳ ಆಯ್ಕೆಗೆ ತೀರ್ಪುಗಾರರಾಗಿ ರಾಮಚಂದ್ರ ಎಂ.ಎಸ್., ಹೇಮಲತಾ ಎಸ್.ಆರ್., ಅನುರಾಧಾ ಕೆ.ಎಸ್. ಮತ್ತು ಚೈತ್ರಾ ಶ್ರೀಪತಿ ಪಾಲ್ಗೊಂಡಿದ್ದರು.
ಸಂಸ್ಥೆಯ ಕಾರ್ಯದರ್ಶಿ ಆರ್. ಕೌಟಿಲ್ಯ, ಪ್ರಾಂಶುಪಾಲ ಮಹೇಂದ್ರ ಎಂ.ಎನ್., ಶಿಕ್ಷಣ ಸಂಯೋಜಕಿ ಶ್ವೇತಾ ಕೆ.ಎಸ್. ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.