
ಕೆ.ಆರ್. ನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ನಮ್ಮೆಲ್ಲರಿಗೂ ಬಹುದೊಡ್ಡ ಗ್ರಂಥವಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಇಲ್ಲಿನ ವಾಲ್ಮೀಕಿ ಸಮುದಾಯ ಭವನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಪುರಸಭೆ ಸಹಯೋಗದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ನಮ್ಮ ದೇಶದಲ್ಲಿನ ವಿವಿಧ ಜಾತಿ, ಜನಾಂಗ, ಧರ್ಮ, ಭಾಷಿಕರು ಗೌರವದಿಂದ ಬದುಕಬೇಕು ಎಂದು ಸಂವಿಧಾನ ರಚಿಸಿ ಅದರ ಅಡಿಯಲ್ಲಿ ಉತ್ತಮವಾದ ಬದುಕು ರೂಪಿಸಿಕೊಳ್ಳಲು ನಮ್ಮೆಲ್ಲರಿಗೂ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಅಂಬೇಡ್ಕರ್ ಅವರು ನಮ್ಮೆಲ್ಲರಿಗೂ ದಾರಿ ದೀಪವಾಗಿದ್ದಾರೆ, ಮಾರ್ಗದರ್ಶಕರಾಗಿದ್ದಾರೆ. ನಾವೆಲ್ಲರೂ ಭಾರತೀಯರು, ಎಲ್ಲರೂ ಸಮಾನವಾಗಿ ಬದುಕಬೇಕು, ಯಾರೂ ಮೇಲು ಇಲ್ಲ, ಕೀಳು ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಸಂವಿಧಾನ ಇಲ್ಲದೇ ಹೋಗಿದ್ದರೆ ನಾವ್ಯಾರೂ ಸಾಮಾನ್ಯ ಜೀವನವೇ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಪ್ರಾಣಿ ಮತ್ತು ನಮ್ಮ ನಡುವೆ ಯಾವುದೇ ವ್ಯತ್ಯಾಸ ಇರುತ್ತಿರಲಿಲ್ಲ. ಆದ್ದರಿಂದ ಅಂಬೇಡ್ಕರ್ ಅವರನ್ನು ಅತ್ಯಂತ ಗೌರವ ಪೂರ್ವಕವಾಗಿ ಧನ್ಯವಾದ ಅರ್ಪಿಸಬೇಕು ಎಂದರು.
ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಂ.ಶಂಕರಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಮುಖಂಡರಾದ ಹನಸೋಗೆ ನಾಗರಾಜು, ಎಂ.ಲೋಕೇಶ್, ಶಾಂತಿರಾಜು, ಎಂ.ಎಚ್.ಸ್ವಾಮಿ, ಉಪನ್ಯಾಸಕರಾದ ಪ್ರಭು, ಶ್ರೀನಿವಾಸ್, ನಿವೃತ್ತ ಪ್ರಾಂಶುಪಾಲ ಕೃಷ್ಣ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿ.ಪಿ.ಕುಲದೀಪ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡ ಮಹೇಶ್, ಕಾಂಗ್ರೆಸ್ ವಕ್ತಾರ ಸಯ್ಯದ್ ಜಾಬೀರ್, ಮುಖಂಡರಾದ ಹೊಸಕೋಟೆ ಚಲುವರಾಜು, ನಂದೀಶ್, ಮಂಜುರಾಜ್, ಜೆ.ಎಂ.ಕುಮಾರ್, ಹೆಬ್ಬಾಳು ನಾಗೇಂದ್ರ, ಬಿಇಒ ಆರ್.ಕೃಷ್ಣಪ್ಪ, ಕುಮಾರಸ್ವಾಮಿ, ಸೋಮಣ್ಣ ಭಾಗವಹಿಸಿದ್ದರು.
ಇದಕ್ಕೂ ಮೊದಲು ಇಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಹೊರಟ ಮೆರವಣಿಗೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಸಂವಿಧಾನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.