ಎಚ್.ಡಿ.ಕೋಟೆ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆಯಲ್ಲಿ ಗಾಯಗೊಂಡ ಮರಿಯಾನೆ ಮತ್ತೆ ಕಾಣಿಸಿಕೊಂಡಿದೆ.
ತಾಯಿ ಆನೆಯೊಂದಿಗೆ ಮರಿಯಾನೆ ತೆರಳುತ್ತಿದ್ದ ದೃಶ್ಯ ಗುರುವಾರ ಸಂಜೆ ಸಫಾರಿ ವೇಳೆ ವನ್ಯಜೀವಿ ಛಾಯಾಗ್ರಾಹಕ ಮಣಿಕಂಠ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
‘ಆನೆ ಮರಿಯ ಬಲಭಾಗದ ಕಾಲಿಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ನಡೆದುಕೊಂಡು ಹೋಗುವುದಕ್ಕೆ ತೊಂದರೆ ಪಡುತ್ತಿದೆ. ಅದನ್ನು ಸೆರೆ ಹಿಡಿದು ಚಿಕಿತ್ಸೆ ನೀಡಬೇಕು’ ಎಂದು ಮಣಿಕಂಠ ಮನವಿ ಮಾಡಿದ್ದಾರೆ.
‘ಕಳೆದ 12 ದಿನಗಳ ಹಿಂದೆ ಮರಿಯಾನೆ ಗಾಯಗೊಂಡ ಮಾಹಿತಿ ಸಿಕ್ಕಿತ್ತು. ಪ್ರಾಣಿ ತಜ್ಞ ಡಾ. ರಮೇಶ್ ಹಾಗೂ ಸಿಬ್ಬಂದಿಯ ಜೊತೆಗೂಡಿ ಭೀಮ ಮತ್ತು ಪ್ರಶಾಂತ ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿದ್ದರೂ ಮರಿಯಾನೆ ಹಾಗೂ ತಾಯಿ ಆನೆ ಸಿಕ್ಕಿರಲಿಲ್ಲ. ಹೀಗಾಗಿ, ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದೆವು. ಮೇಲಧಿಕಾರಿಗಳ ಅನುಮತಿ ಪಡೆದು ಪುನಃ ಕಾರ್ಯಾಚರಣೆ ನಡೆಸಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಭರತ್ ತಲ್ವಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.