
ತಿ.ನರಸೀಪುರ: ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ವಿಮಾ ಸೌಲಭ್ಯವನ್ನು ಪಡೆಯುವಂತೆ ಎಲ್ಐಸಿ ಮೈಸೂರು ವಿಭಾಗದ ಹಿರಿಯ ವಿಭಾಗೀಯ ಅಧಿಕಾರಿ ಎಂ.ಕೃಷ್ಣವೇಣಿ ಸಲಹೆ ನೀಡಿದರು.
ದೊಡ್ಡಮುಲಗೂಡು ಗ್ರಾಮವನ್ನು 2024-2025ನೇ ಸಾಲಿನ ಸಂಪೂರ್ಣ ವಿಮಾ ಗ್ರಾಮ ಘೋಷಿಸಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ದೊಡ್ಡಮುಲಗೂಡು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗೆ ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ನೀಡಿದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2047ರ ವೇಳೆಗೆ ರಾಷ್ಟ್ರದ ಎಲ್ಲಾ ನಾಗರಿಕರಿಗೆ ಜೀವ ವಿಮಾಸೌಲಭ್ಯ ಒದಗಿಸುವ ಗುರಿಯನ್ನು ಎಲ್ಐಸಿ ಹೊಂದಿದ್ದು, ಪ್ರತಿಯೊಬ್ಬರು ವಿಮಾ ರಕ್ಷಣೆ ಪಡೆಯುವಂತೆ ತಿಳಿಸಿದರು.
ಮೈಸೂರು ವಿಭಾಗದ ಮಾರುಕಟ್ಟೆ ಪ್ರಬಂಧಕ ಜೀವನ್ ಕುಮಾರ್ ಮಾತನಾಡಿ, ರಾಷ್ಟ್ರದ ಅಭಿವೃದ್ಧಿಗಾಗಿ ನಿಗಮವು ಹಲವು ಯೋಜನೆಗಳಿಗೆ ಹೂಡಿಕೆ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಜನರು ಇನ್ನೂ ಹೆಚ್ಚಿನ ಜೀವವಿಮಾ ಸೌಲಭ್ಯಕ್ಕೆ ನೋಂದಣಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಕ್ರಯ ಪ್ರಬಂಧಕ ಗುರುರಾಜರಾವ್ ಅವರು ವಿಮಾ ಗ್ರಾಮ ಮತ್ತು ವಿಮಾ ಶಾಲೆಯ ಬಗ್ಗೆ ತಿಳಿಸಿದರು.
ಸಂಪೂರ್ಣ ವಿಮಾ ಗ್ರಾಮಕ್ಕೆ ಶ್ರಮಿಸಿದ ಜೀವವಿಮಾ ಪ್ರತಿನಿಧಿಗಳಾದ ಎಂ.ಎಂ. ಮಹದೇವ ಹಾಗೂ ಪಿ. ಸುಮಾ ಅವರನ್ನು ಇದೇ ವೇಳೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ವಿಕ್ರಯ ಪ್ರಬಂಧಕರಾದ ಎಸ್.ಎ.ಮಂಜುನಾಥ, ಉಮಾಶಂಕರ್, ಕೊಳ್ಳೇಗಾಲ ಮುಖ್ಯ ಶಾಖೆಯ ಹಿರಿಯ ಶಾಖಾಧಿಕಾರಿ ಜಿ.ಎನ್. ಮಹದೇವಸ್ವಾಮಿ, ಟಿ. ನರಸೀಪುರ ಶಾಖೆಯ ಅಧಿಕಾರಿ ಕೆ.ಎನ್. ಕಾಂತರಾಜಪ್ಪ, ಉಪ ಶಾಖಾಧಿಕಾರಿ ವೆಂಕಟೇಶ್, ಮುಖಂಡರಾದ ಸ್ವಾಮಿಗೌಡ, ಶಿನೇಗೌಡ, ರಾಮಕೃಷ್ಣ, ಮಲ್ಲೇಶ, ಡಿ.ಎಂ. ಸೋಮಶೇಖರ್, ಶಾಲೆಯ ಮುಖ್ಯ ಶಿಕ್ಷಕ ಎಂ.ಎಸ್.ಪ್ರಕಾಶ್, ಮಲ್ಲಿಕಾರ್ಜುನ್ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.