ಮೈಸೂರು: ಕಾರ್ಮಿಕ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ನೂತನ ಕಾರ್ಮಿಕ ಕಾನೂನುಗಳು ಕಾರ್ಮಿಕ ಸ್ನೇಹಿ ಆಗಿಲ್ಲ. ಬದಲಿಗೆ, ಬಂಡವಾಳಷಾಹಿಗಳನ್ನು ಓಲೈಸುವಂತಿದೆ ಎಂದು ಕಿಡಿಕಾರಿದರು.
ಇದುವರೆಗೂ 100ಕ್ಕಿಂತ ಹೆಚ್ಚು ಇರುವ ಕಾರ್ಖಾನೆಯನ್ನು ಮುಚ್ಚಲು, ಲೇ ಆಫ್ ಮಾಡಲು ಸರ್ಕಾರದ ಅನುಮತಿ ಪಡೆಯಬೇಕಿತ್ತು. ಆದರೆ, ಇದರ ಮಿತಿಯನ್ನು ಈಗ 300ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಕಾರ್ಮಿಕರ ಕೆಲಸದ ಭದ್ರತೆಗೆ ಧಕ್ಕೆಯಾಗುವಂತಾಗಿದೆ ಎಂದು ಅವರು ಅಳಲು ತೋಡಿಕೊಂಡರು.
ಈ ಮೊದಲು ಮುಷ್ಕರ ನಡೆಸಲು 14 ದಿನಗಳ ಮುಂಚಿತವಾಗಿ ನೋಟಿಸ್ ನೀಡಬಹುದಿತ್ತು. ಈಗ 60 ದಿನಗಳಿಗೆ ಮುಂಚೆ ನೀಡಬೇಕಿದೆ. ಜತೆಗೆ, ಸಂಧಾನ ಅಧಿಕಾರಿಯ ಮುಂದೆ, ಕೈಗಾರಿಕಾ ರಾಜ್ಯ ಪರಿಹಾರ ಮಂಡಳಿ, ರಾಷ್ಟ್ರೀಯ ಕೈಗಾರಿಕಾ ವ್ಯಾಜ್ಯ ಪರಿಹಾರ ಮಂಡಳಿಗಳಲ್ಲಿ ವಿಚಾರಣೆ ನಡೆಸುವ ವೇಳೆ ಮುಷ್ಕರ ನಡೆಸುವಂತಿಲ್ಲ ಎಂದು ಮಾರ್ಪಾಡಿಸಲಾಗಿದೆ. ಇದರಿಂದ ಕಾರ್ಮಿಕರಿಗೆ ನ್ಯಾಯ ಸಿಗುವ ಸಾಧ್ಯತೆ ತೀರ ಕಡಿಮೆಯಾಗಿದೆ ಮತ್ತು ವಿಳಂಬವಾಗಿದೆ ಎಂದು ಹೇಳಿದರು.
ಕಾನೂನುಬಾಹಿರ ಮುಷ್ಕರ, ನಿಯಮ ಉಲ್ಲಂಘನೆ ಮೊದಲಾದ ಕ್ರಮಗಳ ಮೂಲಕ ಕಾರ್ಮಿಕರಿಗೆ, ಕಾರ್ಮಿಕರ ನಾಯಕರಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಅವಕಾಶ ನೀಡಲಾಗಿದೆ. ಈ ನಿಯಮವನ್ನು ಮಾಲೀಕರು ಮತ್ತು ಸರ್ಕಾರ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದು ಪ್ರಜಾತಾಂತ್ರಿಕವಾಗಿ ನಡೆಸುವ ಹೋರಾಟಗಳನ್ನು ಹತ್ತಿಕ್ಕುವ ಒಂದು ಹುನ್ನಾರ ಎಂದು ಕಿಡಿಕಾರಿದರು.
ನಿಗದಿತ ಅವಧಿಯ ಉದ್ಯೋಗ ಎಂಬ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ. ಇದರಿಂದ ಕಾರ್ಮಿಕರಿಗೆ ಕಾಯಂ ಕೆಲಸ ಎನ್ನುವುದು ಹಗಲುಗನಸಾಗಲಿದೆ ಎಂದು ಹರಿಹಾಯ್ದರು.
ಗುತ್ತಿಗೆ ಕಾರ್ಮಿಕರ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿರುವುದರಿಂದ ಗುತ್ತಿಗೆ ಕಾರ್ಮಿಕರ ಬದುಕು ಅತಂತ್ರವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಐಟಿಯುಸಿಯ ಎಚ್.ಆರ್.ಶೇಷಾದ್ರಿ, ಸಿಐಟಿಯುನ ಬಾಲಾಜಿರಾವ್ ಹಾಗೂ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.