ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪಂಚತಾರಾ ನಟಿ. ಅವರನ್ನು ನಟನೆಯಲ್ಲಿ ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಸಿ.ಎಸ್.ಪುಟ್ಟರಾಜು ವ್ಯಂಗ್ಯವಾಡಿದರು.
ಇಲ್ಲಿನ ಬುಧವಾರ ನಡೆದ ಮೈಸೂರು ನಿವಾಸಿಗಳ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಪಕ್ಷೇತರ ಅಭ್ಯರ್ಥಿಯು ಯಾವಾಗಲೂ ನನ್ನ ಇನ್ನೊಂದು ಮುಖ ನೋಡಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಅದನ್ನು ಅವರು ಜನರಿಗೆ ತೋರಿಸಬೇಕು ಎಂದು ಸವಾಲೆಸೆದರು.
ಸುದೀರ್ಘ ರಾಜಕೀಯದಲ್ಲಿ ತೊಡಗಿರುವ ದೇವೇಗೌಡರನ್ನು ಅವರು ಕೆಣಕುತ್ತಿದ್ದಾರೆ. ಜೆಡಿಎಸ್ ಮುಖಂಡರ ಮೇಲೆ ಐಟಿ ದಾಳಿ ನಡೆಸಿದರೂ ಏನು ಅಲ್ಲಾಡಿಸಲಾಗಲಿಲ್ಲ ಎಂದು ತಿಳಿಸಿದರು.
ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ‘ನಿಖಿಲ್ ರಾಜಕೀಯ ಪ್ರವೇಶಿಸಬೇಕು ಎಂಬುದು ಆತನ ಅಥವಾ ನಮ್ಮ ಸ್ವಂತ ನಿರ್ಧಾರವಲ್ಲ. ಅದು ಮಂಡ್ಯ ಕ್ಷೇತ್ರ ಜನಪ್ರತಿನಿಧಿಗಳ ಒತ್ತಾಸೆಯಾಗಿತ್ತು. ಹಾಗಾಗಿ, ನಾವಿಬ್ಬರೂ ರಾಜಕೀಯಕ್ಕೆ ಬರಬೇಕಾಯಿತು’ ಎಂದರು.
ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗಿಂತ ಗ್ರಾಮ ಪಂಚಾಯಿತಿ ಸದಸ್ಯ ಚೆನ್ನಾಗಿ ಭಾಷಣ ಮಾಡುತ್ತಾನೆ. ರಾಜ್ಯದಲ್ಲಿ ರೈತರ ಸಾಲ ಮನ್ನಾ ಆಗಿಲ್ಲ ಎಂದು ಹುಸಿಯಾಡುತ್ತಾರೆ. ಅವರೊಬ್ಬ ಸುಳ್ಳುಗಾರ. ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸುವ ಅವರಿಗೆ ನಾಚಿಕೆಯಾಗಬೇಕು’ ಎಂದು ಕಿಡಿಕಾರಿದರು.
ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ, ಪ್ರೊ.ಕೆ.ಎಸ್.ರಂಗಪ್ಪ, ಕೆ.ವಿ.ಮಲ್ಲೇಶ್, ಕಿಲಾರೆ ಜಯರಾಮ್, ಪಾಲಿಕೆ ಸದಸ್ಯರಾದ ಪ್ರೇಮಾ ಶಂಕರೇಗೌಡ, ಭಾಗ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.