ಮೈಸೂರು: ‘ಮಕ್ಕಳ ಮನಸು ಸುಂದರ ಮತ್ತು ಸ್ವತಂತ್ರ. ಅವರ ಸಹಜ ಬೆಳವಣಿಗೆಗೆ ಮುಕ್ತ ಅವಕಾಶ ಕಲ್ಪಿಸಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ನಗರದ ಕಿರುರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿರುವ ‘ಕಲಾ ಪ್ರತಿಭೋತ್ಸವ 2025-26’ ಬಾಲ ಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರತಿ ಮಗು ವಿಶ್ವ ಚೈತನ್ಯ. ಅಂತ ಮಗುವನ್ನು ಬಂಧನದಲ್ಲಿ ಕೊಡಿಹಾಕಿ ಒತ್ತಡ ಹೇರಲಾಗುತ್ತಿದೆ. ಇದರಿಂದ ವ್ಯಕ್ತಿತ್ವದ ಸಹಜ ಬೆಳವಣಿಗೆ ಅಸಾಧ್ಯ. ಹೀಗಾಗಿ ಪೋಷಕರು ಮಕ್ಕಳ ಬಗ್ಗೆ ಸಕಾರಾತ್ಮಕ ಭಾವನೆ ಹಾಗೂ ಒಳ್ಳೆಯ ದೃಷ್ಟಿಕೋನ ಹೊಂದಬೇಕು’ ಎಂದು ತಿಳಿಸಿದರು.
‘ಮಕ್ಕಳ ಮನಸು ತುಂಬಾ ಸೂಕ್ಷ್ಮ. ಅವರನ್ನು ಸ್ವತಂತ್ರವಾಗಿ ಬಿಡಬೇಕು. ಪ್ರತಿಭೆ ಅನಾವರಣಕ್ಕೆ ಪ್ರೋತ್ಸಾಹ ನೀಡಬೇಕು. ಕೇವಲ ಅಂಕಗಳಿಗೆ ಮಾತ್ರ ಸೀಮಿತಗೊಳಿಸಿ, ಪ್ರೇರೇಪಿಸುವುದು ಸರಿಯಲ್ಲ’ ಎಂದರು.
‘ಶಿಕ್ಷಣ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಬೇಕು ಎಂಬ ದೃಷ್ಟಿಯಿಂದ ಕಲಾ ಪ್ರತಿಭೋತ್ಸವ ಆಯೋಜಿಸಲಾಗಿದೆ. ಈ ನಾಡಿನ ಕಲೆ, ಸಂಸ್ಕೃತಿ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಾಂಸ್ಕೃತಿಕ ಕ್ಷೇತ್ರ ಎಲ್ಲರಿಗೂ ಮುಖ್ಯ’ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಉದಯ್ ಕುಮಾರ್, ‘ಕಲೆ ಎಂಬುದು ಭಾವನೆ ಹಾಗೂ ಒಳ ಅಂತರಾಳ ಒಳಗೊಂಡಿದೆ. ಮಕ್ಕಳ ಪ್ರತಿಭೆ ಅನಾವರಣಕ್ಕೆ ಇದೊಂದು ಸೂಕ್ತ ವೇದಿಕೆ. ಇಂತಹ ಕಾರ್ಯಕ್ರಮ ಇನ್ನಷ್ಟು ಪ್ರಜ್ವಲಿಸಲಿ’ ಎಂದು ಆಶಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ತೀರ್ಪುಗಾರರಾದ ರಾಜೇಶ್, ಶ್ರೀವಾಣಿ, ಲಕ್ಷ್ಮಿ, ರಮ್ಯಾ, ಅನಿತಾ, ಆನಂದ್ ಕುಮಾರ್, ರಮೇಶ್ ಚಂದ್ರ, ಎ.ಪಿ.ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.