ADVERTISEMENT

‌ಕಲಿಕಾ ಹಬ್ಬ: ಜಿಎಸ್‌ಟಿ ಬಿಲ್‌ಗೆ ಸಿಆರ್‌ಪಿಗಳ ಪರದಾಟ!

ಬಿಇಒಗಳ ಒತ್ತಡ– ಜಿಎಸ್‌ಟಿ ಬಿಲ್‌ಗಾಗಿ ಪರದಾಟ

ಎಂ.ಮಹೇಶ
Published 6 ಫೆಬ್ರುವರಿ 2025, 23:53 IST
Last Updated 6 ಫೆಬ್ರುವರಿ 2025, 23:53 IST
   

ಮೈಸೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ನಡೆಸಬೇಕಿರುವ ‘ಕಲಿಕಾ ಹಬ್ಬ’ಕ್ಕೂ ಮುನ್ನವೇ ‘ಜಿಎಸ್‌ಟಿ ನಂಬರ್‌ ಹೊಂದಿರುವ ಬಿಲ್‌’ ತಂದುಕೊಡುವಂತೆ ಜಿಲ್ಲೆಯ ಬಿಇಒಗಳು ಸೂಚಿಸಿರುವುದು ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ)ಗಳನ್ನು ತೊಂದರೆಗೆ ಸಿಲುಕಿಸಿದೆ. ಬಿಲ್‌ಗಳಿಗಾಗಿ ಅವರು ಅಂಗಡಿಗಳಿಗೆ ಅಲೆದಾಡುವಂತೆ ಮಾಡಿ, ಮಾಲೀಕರಿಗೆ ಕಮಿಷನ್‌ ಕೊಡಬೇಕಾದ ಅನಿವಾರ್ಯಕ್ಕೆ ದೂಡಲಾಗಿದೆ.

2024–25ನೇ ಸಾಲಿನಲ್ಲಿ ಕ್ಲಸ್ಟರ್‌ ಮಟ್ಟದಲ್ಲಿ 1ರಿಂದ 5ನೇ ತರಗತಿಯ ಮಕ್ಕಳಿಗೆ, ವಿಶೇಷವಾಗಿ ಮೂಲಭೂತ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ (ಎಫ್‌ಎಲ್‌ಎನ್‌) ಚಟುವಟಿಕೆಗಳ ಬಲವರ್ಧನೆಗೆ ‘ಕಲಿಕಾ ಹಬ್ಬ’ ಆಯೋಜಿಸುವಂತೆ ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯಿಂದ ಜ.27ರಂದು ಸುತ್ತೋಲೆ ಹೊರಡಿಸಲಾಗಿದೆ. ಬಿಇಒಗಳ ಖಾತೆಗೆ ತಲಾ ಕ್ಲಸ್ಟರ್‌ಗೆ ₹ 25 ಸಾವಿರದಂತೆ ಅನುದಾನ ಬಿಡುಗಡೆಯಾಗಿದ್ದು, ‌ಸಿಆರ್‌ಪಿಗಳಿಗೆ ಒದಗಿಸಲು ‘ಖರ್ಚಿನ ಬಿಲ್‌’ ಕೇಳುತ್ತಿರುವುದರಿಂದ ಗೊಂದಲ ಮೂಡಿದೆ.

ತಲೆನೋವು:‌ ಜಿಲ್ಲೆಯಲ್ಲಿ 175 ಮಂದಿ ಸಿಆರ್‌ಪಿಗಳಿದ್ದಾರೆ. ‘ಹಣವಿಲ್ಲದೇ ಹೇಗೆ ಕಾರ್ಯಕ್ರಮ ಮಾಡುವುದು, ಸಾಮಗ್ರಿಗಳನ್ನು ಖರೀದಿಸದೇ ಅಂಗಡಿಯವರು  ಬಿಲ್‌ ಕೊಡುತ್ತಾರೆಯೇ? ಕೊಡುವವರು ಕಮಿಷನ್ ಕೇಳುತ್ತಿದ್ದಾರೆ. ಆಯೋಜನೆಯ ಸವಾಲಿನೊಂದಿಗೆ ಬಿಲ್‌ಗಳನ್ನು ಹೊಂದಿಸುವುದು ತಲೆನೋವಾಗಿದೆ. ಅನಗತ್ಯವಾಗಿ ಒತ್ತಡ ಹೇರಲಾಗುತ್ತಿದೆ’ ಎಂದು ಸಿಆರ್‌ಪಿಗಳು ‘‍ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

ADVERTISEMENT

‘ಬಿಲ್‌ಗಾಗಿ ಅಂಗಡಿಗಳಿಗೆ ಸುತ್ತಾಡಬೇಕಾಗಿದೆ. ಇದೇ 10ನೇ ತಾರೀಖಿನೊಳಗೆ ಕಾರ್ಯಕ್ರಮ ಆಯೋಜಿಸಬೇಕೆಂಬ ಗಡುವನ್ನೂ ವಿಧಿಸಲಾಗಿದೆ. ಕೆಲವೇ ದಿನಗಳಲ್ಲಿ ಹಾಗೂ ಮುಂಗಡ ಹಣವೂ ಇಲ್ಲದೇ ನಡೆಸುವುದು ಹೇಗೆ’ ಎಂಬ ಪ್ರಶ್ನೆ ಅವರದು.

‘ಹಣವನ್ನು ಖಜಾನೆ–2 ತಂತ್ರಾಂಶದಿಂದ ಸಿಆರ್‌ಪಿಗಳ ಖಾತೆಗೆ ವರ್ಗಾಯಿಸಲಾಗದು. ಅಂಗಡಿಗಳಿಗೆ ಸಿಎಸ್‌ಎಸ್‌ ಪೋರ್ಟಲ್ ಮೂಲಕ ಹಣ ನೀಡುತ್ತೇವೆ. ಅದಕ್ಕಾಗಿ, ‘ವೆಂಡರ್ ಐಡಿ ಕ್ರಿಯೇಟ್’ ಮಾಡಲು ಅಂಗಡಿಗಳ ಬ್ಯಾಂಕ್‌ ಖಾತೆ ಸಂಖ್ಯೆ ಪಡೆದು ಬರಲು ಹೇಳಿರುವುದರಿಂದ ತೊಂದರೆಯಾಗಿದೆ’ ಎಂದು ಸಿಆರ್‌ಪಿಗಳು ತಿಳಿಸಿದರು.

ಜಿಎಸ್‌ಟಿಯನ್ನೂ ಕಟ್ಟಬೇಕು:

ಹಬ್ಬ’ಕ್ಕಾಗಿ ಸ್ಟೇಷನರಿ ಸಾಮಗ್ರಿಗಳು, ಊಟ, ಪ್ರಮಾಣಪತ್ರ, ಬಹುಮಾನ, ಶಾಮಿಯಾನ ವ್ಯವಸ್ಥೆ ಮಾಡಬೇಕು. ಅದಕ್ಕೆ ಹಣ ಬೇಕು. ಆದರೆ, ಖರೀದಿಗೆ ಮುನ್ನವೇ ಬಿಲ್ ಕೇಳಲು ಮುಜುಗರವಾಗಿದೆ. ಖರೀದಿಸಿ ಬಿಲ್‌ ಪಡೆಯಬೇಕಾದರೆ ಜಿಎಸ್‌ಟಿ ಕಟ್ಟಲೇಬೇಕು. ಕೆಲವರು ಸಾಲ ಮಾಡುತ್ತಿದ್ದಾರೆ. ಮಹಿಳಾ ಸಿಆರ್‌ಪಿಗಳಿಗೆ ಹೆಚ್ಚು ತೊಂದರೆಯಾಗುತ್ತಿದೆ’ ಎಂದರು.

‘ಹಣವೇ ಬಿಡುಗಡೆಯಾಗದೆ ಸಾಲದ ರೂಪದಲ್ಲಿ ಪಡೆಯಬೇಕಾಗಿದೆ. ಜಿಎಸ್‌ಟಿ ಜೊತೆಗೆ ಕಮಿಷನ್ ಕೂಡ ಕೊಡಬೇಕಾಗಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವುದು ಹೇಗೆ?’ ಎಂದು ಸಿಆರ್‌ಪಿಯೊಬ್ಬರು ಕೇಳಿದರು.

‘ಸರ್ಕಾರ ಕೊಟ್ಟರೂ ಬಿಇಒಗಳು ಕೊಡುತ್ತಿಲ್ಲ. ಬಿಲ್‌ ತರಬೇಕೆಂದು ಸಿಆರ್‌ಪಿಗಳನ್ನು ಬೀದಿಗೆ ತರಲಾಗಿದೆ’ ಎಂದು ಮುಖ್ಯಶಿಕ್ಷಕರೊಬ್ಬರು ಹೇಳಿದರು.

ಸಿಆರ್‌ಪಿಗಳು ಈಗ ಬಿಲ್‌ ಸಂಗ್ರಹಿಸುವ ಒತ್ತಡಕ್ಕೆ ಸಿಲುಕಿದ್ದಾರೆ. ನಿಯಮ ಸರಳೀಕರಿಸಿ ಹಣವನ್ನು ಬಿಇಒಗಳು ಸಿಆರ್‌ಪಿಗಳಿಗೆ ನೇರವಾಗಿ ಬಿಡುಗಡೆ ಮಾಡಬಹುದು
ಅರವಿಂದ ಶರ್ಮಾ, ಎನ್‌ಟಿಎಂ ಶಾಲೆ ಎಸ್‌ಡಿಎಂಸಿಯ ವಿಶೇಷ ಆಹ್ವಾನಿತ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.