ADVERTISEMENT

ಮಂಡ್ಯ ರಮೇಶ್‌ಗೆ ಕನ್ನಡ ರಂಗಸಿರಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 7:23 IST
Last Updated 5 ಜೂನ್ 2023, 7:23 IST
ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ ಶನಿವಾರ ನಡೆದ ಉತ್ಸವ-2023ರಲ್ಲಿ ರಂಗಕರ್ಮಿ ಮಂಡ್ಯ ರಮೇಶ್‌ ಅವರಿಗೆ ಕನ್ನಡ ರಂಗಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು
ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ ಶನಿವಾರ ನಡೆದ ಉತ್ಸವ-2023ರಲ್ಲಿ ರಂಗಕರ್ಮಿ ಮಂಡ್ಯ ರಮೇಶ್‌ ಅವರಿಗೆ ಕನ್ನಡ ರಂಗಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಮೈಸೂರು: ‘ಮಕ್ಕಳಲ್ಲಿಯೂ ಕನ್ನಡ ಭಾಷೆ, ಸಂಸ್ಕೃತಿ ಕುರಿತು ಆಸಕ್ತಿ ಮೂಡಿಸಲು ರಂಗಭೂಮಿ ಅತ್ಯುತ್ತಮ ಮಾಧ್ಯಮವಾಗಿದೆ’ ಎಂದು ರಂಗಕರ್ಮಿ ಮಂಡ್ಯ ರಮೇಶ್‌ ಹೇಳಿದರು.

ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನಲ್ಲಿ ನೆಲೆಸಿದ ಕನ್ನಡಿಗ ರಂಗಭೂಮಿ ಆಸಕ್ತರೇ ಹುಟ್ಟುಹಾಕಿದ ‘ರಂಗವರ್ತುಲ’ದ ತಂಡವು ವಾಷಿಂಗ್ಟನ್‌ನಲ್ಲಿ ಶನಿವಾರ ಆಯೋಜಿಸಿದ್ದ ಉತ್ಸವ-2023ರಲ್ಲಿ ‘ಕರಿಮಾಯಿ’ ಪ್ರದರ್ಶನದ ಬಳಿಕ ಮಾತನಾಡಿದರು.

‘ನಾಟಕ ಕಲಾವಿದನಿಗೆ ‘ಗ್ರೇಸ್’ ಮತ್ತು ‘ಫೋರ್ಸ್’ ಎರಡೂ ಬೇಕಾಗುತ್ತದೆ. ನಿತೀಶ್ ಶ್ರೀಧರ್ ಕಟ್ಟಿಕೊಂಡಿರುವ ತಂಡದ ಸದಸ್ಯರಲ್ಲಿ ಇವೆರಡನ್ನೂ ನಾನು ನಿಚ್ಚಳವಾಗಿ ಗಮನಿಸಿದೆ. ಇದರಿಂದಲೇ ನಾಟಕವು ಅತ್ಯುತ್ತಮವಾಗಿ ಮೂಡಿಬಂತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಅಮೆರಿಕ ಕನ್ನಡಿಗ ಸಾಹಿತಿ ಡಾ. ಮೈಸೂರು ನಟರಾಜ್‌ ಮಾತನಾಡಿ, ‘ಕರ್ನಾಟಕದಲ್ಲಿನ ವೃತ್ತಿಪರ ರಂಗ ಕಲಾವಿದರಿಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದೆ ಉತ್ಕೃಷ್ಟ ಮಟ್ಟದ ಕಲಾ ಪ್ರದರ್ಶನ ನೀಡಿದ ‘ರಂಗವರ್ತುಲ’ ಸದಸ್ಯರ ಉತ್ಸಾಹ ಮೆಚ್ಚಬೇಕಾದದ್ದು. ನಿತೀಶ್ ಶ್ರೀಧರ್ ಅವರಿಂದ ಇನ್ನಷ್ಟು ಸಂಖ್ಯೆಯ ನಾಟಕಗಳ ಪ್ರದರ್ಶನ ಮತ್ತು ಆಸಕ್ತರಿಗೆ ರಂಗ ತರಬೇತಿಯನ್ನು ನಿರೀಕ್ಷಿಸಬಹುದು’ ಎಂದರು. 

ರಂಗವರ್ತುಲದ ಸ್ಥಾಪಕ ನಿರ್ದೇಶಕ ನಿತೀಶ್ ಶ್ರೀಧರ್ ಅವರ ನಿರ್ದೇಶನದ ನಾಟಕದಲ್ಲಿ 30ಕ್ಕೂ ಹೆಚ್ಚು ಹವ್ಯಾಸಿ ರಂಗಾಸಕ್ತರು ಅಭಿನಯಿಸಿದರು. ಸುನೀತಾ ಅನಂತಸ್ವಾಮಿ ರಂಗಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.