ಮೈಸೂರು: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಭಾನುವಾರ ಕಲಾಮಂದಿರದ ಎದುರು ಹಮ್ಮಿಕೊಂಡಿದ್ದ ‘ಕನ್ನಡಕ್ಕಾಗಿ ನಾವು’ ಮಾತಾಡ್– ಮಾತಾಡ್ ಕನ್ನಡ ಮೈಸೂರು ವಿಭಾಗ ಮಟ್ಟದ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ ಮಾತನಾಡಿ, ‘ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅ.24ರಿಂದ ನ.1ರವರೆಗೆ ಉತ್ಸವ ಹಮ್ಮಿಕೊಳ್ಳಲಾಗಿದೆ. ಕಲಾಮಂದಿರದ ಎದುರು ಹಮ್ಮಿಕೊಂಡಿರುವ ಗೀತಗಾಯನ ಕಾರ್ಯಕ್ರಮ ಅ.26ರವರೆಗೆ ನಡೆಯಲಿದೆ. ಅ.31ರವರೆಗೆ ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ಗೀತಗಾಯನ, ನೃತ್ಯರೂಪಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.29ರಿಂದ 31ರವರೆಗೆ ಎಂಟು ಜಿಲ್ಲೆಗಳ ಮೈಸೂರು ವಿಭಾಗದ ಮಟ್ಟದ ಸಾಂಸ್ಕೃತಿಕ ಉತ್ಸವವನ್ನು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.
ಸಾಹಿತಿಗಳು ರಚಿಸಿದ ಗೀತೆಗಳ ಗಾಯನ ನಡೆಯಿತು. ಗಾಯಕರಾದ ಲೋಕೇಶ್, ಸಿದ್ದರಾಜು, ಭವತಾರಿಣಿ, ಲಿಂಗರಾಜು, ಸಿಂಚನಾ ಅವರ ತಂಡ ‘ನಾವು ಭಾರತೀಯರು’, ‘ಹಚ್ಚೇವು ಕನ್ನಡದ ದೀಪ’, ‘ಇಳಿದು ಬಾ ತಾಯಿ’, ‘ಹುಟ್ಟಿದರೆ ಕನ್ನಡ ನಾಡಲ್ಲಿ’, ‘ಯೆಂಡ ಯೆಡ್ತಿ ಕನ್ನಡ್ ಪದಗೊಳ್’, ‘ಹೇಳ್ಕೊಳ್ಳಕ್ ಒಂದ್ ಊರು‘, ‘ಈ ಕನ್ನಡ ಮಣ್ಣನು ಮರಿಬೇಡ’ ಗೀತೆಗಳನ್ನು ಪ್ರಸ್ತುತಪಡಿಸಿತು. ಪಕ್ಕವಾದ್ಯದಲ್ಲಿ ಪುರುಷೋತ್ತಮ್ (ಕೀಬೋರ್ಡ್), ರಘು (ತಬಲ), ಗುರುದತ್ (ರಿದಂ) ಸಾಥ್ ನೀಡಿದರು. ಶ್ರೀವತ್ಸ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮಳೆ ಬಂದಿದ್ದರಿಂದ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.