ADVERTISEMENT

ವಿಧಾನಸಭಾ ಚುನಾವಣೆ ಹಿನ್ನೆಲೆ ಬಸ್ಸುಗಳ ಕೊರತೆ; ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 10 ಮೇ 2023, 2:19 IST
Last Updated 10 ಮೇ 2023, 2:19 IST
ಮತದಾನ ಮಾಡಲು ಊರಿಗೆ ತೆರಳಲು ಮಂಗಳವಾರ ಮೈಸೂರು ಕೆಎಸ್ಆರ್‌ಟಿಸಿ ಸಬ್‌ ಅರ್ಬನ್‌ ಬಸ್ ನಿಲ್ದಾಣಕ್ಕೆ ಬಂದ ನಾಗರಿಕರು, ಬಸ್‌ ಕೊರತೆಯಿಂದಾಗಿ ಲಭ್ಯವಿದ್ದ ಬಸ್‌ನಲ್ಲಿಯೇ ಸೀಟು ಗಿಟ್ಟಿಸಲು ಮುಗಿಬಿದ್ದರು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ
ಮತದಾನ ಮಾಡಲು ಊರಿಗೆ ತೆರಳಲು ಮಂಗಳವಾರ ಮೈಸೂರು ಕೆಎಸ್ಆರ್‌ಟಿಸಿ ಸಬ್‌ ಅರ್ಬನ್‌ ಬಸ್ ನಿಲ್ದಾಣಕ್ಕೆ ಬಂದ ನಾಗರಿಕರು, ಬಸ್‌ ಕೊರತೆಯಿಂದಾಗಿ ಲಭ್ಯವಿದ್ದ ಬಸ್‌ನಲ್ಲಿಯೇ ಸೀಟು ಗಿಟ್ಟಿಸಲು ಮುಗಿಬಿದ್ದರು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ.ಟಿ   

ಮೈಸೂರು: ವಿಧಾನಸಭಾ ಚುನಾವಣೆಗೆ ಹೆಚ್ಚಿನ ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಯೋಜಿಸಿದ್ದರಿಂದ ನಗರದಲ್ಲಿ ನಾಗರಿಕರು ಮಂಗಳವಾರ ಪರದಾಡಿದರು. ಬುಧವಾರವೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.

ನಗರದಲ್ಲಿ ವಾಸಿಸುವ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಕ್ಷೇತ್ರಗಳ ಮತದಾರರು ಊರುಗಳಿಗೆ ತೆರಳಲು ತೊಂದರೆಪಟ್ಟರು. ನಗರ ಬಸ್‌ ನಿಲ್ದಾಣ ಹಾಗೂ ಗ್ರಾಮಾಂತರ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.

ನಿಲ್ದಾಣಕ್ಕೆ ಬರುವ ಮುನ್ನವೇ ಬಸ್‌ಗಳು ಪ್ರಯಾಣಿಕರಿಂದ ತುಂಬಿದ್ದವು. ಅಗ್ರಹಾರ, ಲಕ್ಷ್ಮಿ ಟಾಕೀಸ್‌, ಪಾಠಶಾಲೆ, ರೈಲು ನಿಲ್ದಾಣದಲ್ಲಿ ಜನರ ಸಂಖ್ಯೆ ಹೆಚ್ಚಾಗಿತ್ತು. ಬಸ್‌ಗಳು ಸಿಗದೆ ಹೈರಾಣಾದರು. ಖಾಸಗಿ ಟೆಂಪೊ, ಟ್ಯಾಕ್ಸಿಗಳನ್ನು ಅವಲಂಬಿಸಿದರು. ನಗರ ಬಸ್‌ಗಳು ಸಿಗದೆ ಆಟೊ, ಬಾಡಿಗೆ ಬೈಕ್‌ ಸೇವೆಗಳನ್ನು ಅವಲಂಬಿಸಿದರು. 

ADVERTISEMENT

ಎಚ್‌.ಡಿ.ಕೋಟೆ, ನಂಜನಗೂಡು, ತಿ.ನರಸೀಪುರಕ್ಕೆ ತೆರಳುವವರು ಖಾಸಗಿ ಬಸ್‌ಗಳನ್ನು ಅವಲಂಬಿಸಿದರು. ಕಿಕ್ಕಿರಿದು ತುಂಬಿದ ಬಸ್‌ಗಳಲ್ಲಿಯೇ ತೆರಳಿದರು. 

‘ಬಸ್‌ ತೊಂದರೆಯಾಗುತ್ತದೆ ಎಂದಿದ್ದರೆ ಬೈಕ್‌ನಲ್ಲಿಯೇ ಬರುತ್ತಿದ್ದೆ. ಎರಡು ಮೂರು ದಿನಗಳ ಹಿಂದೆಯೇ ತಿಳಿಸಬೇಕಿತ್ತು’ ಎಂದು ವಡ್ಡರಹುಂಡಿಯ ಲೋಕೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ಸಹಕರಿಸಿ

‘ಚುನಾವಣೆಗೆ ನಿಗಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ನಿಯೋಜಿಸಲಾಗಿದೆ. ಅದರಿಂದ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಪ್ರಯಾಣಿಕರು ಸಹಕರಿಸಬೇಕು’ ಎಂದು ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.