ADVERTISEMENT

ಬಿಜೆಪಿ ಜೊತೆ ಸಿದ್ದರಾಮಯ್ಯ ಕೈಜೋಡಿಸಿರುವ ಗುಮಾನಿ ಇದೆ: ಪ್ರತಾಪಸಿಂಹ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 11:50 IST
Last Updated 10 ನವೆಂಬರ್ 2020, 11:50 IST
ಸಂಸದ ಪ್ರತಾಪಸಿಂಹ ಹಾಗೂ ಸಿದ್ದರಾಮಯ್ಯ
ಸಂಸದ ಪ್ರತಾಪಸಿಂಹ ಹಾಗೂ ಸಿದ್ದರಾಮಯ್ಯ   

ಮೈಸೂರು: ‘ಕಾಂಗ್ರೆಸ್ ಹಾಳಾದರೂ ಸರಿ ಡಿ.ಕೆ.ಶಿವಕುಮಾರ್‌ ಅವರಿಗೆ ಯಾವುದೇ ಸ್ಥಾನಮಾನ ಸಿಗಬಾರದು ಎಂಬುದು ಸಿದ್ದರಾಮಯ್ಯ ಅವರ ಉದ್ದೇಶ. ಈ ಕಾರಣಕ್ಕೆ ಚುನಾವಣೆಗಳಲ್ಲಿ ಅವರು ತಮ್ಮ ಪಕ್ಷದ ಸೋಲನ್ನು ಬಯಸುತ್ತಿದ್ದಾರೆ’ ಎಂದು ಸಂಸದ ಪ್ರತಾಪಸಿಂಹ ಮಂಗಳವಾರ ಇಲ್ಲಿ ಹೇಳಿದರು.

‘ಕೆಪಿಸಿಸಿ ಅಧ್ಯಕ್ಷರೇ ಮುಖ್ಯಮಂತ್ರಿ ಆಗುವುದು ಕಾಂಗ್ರೆಸ್ ಪರಂಪರೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಡಾ.ಜಿ.ಪರಮೇಶ್ವರ್‌ ಅವರನ್ನು ಸೋಲಿಸಿದಂತೆ ಶಿವಕುಮಾರ್‌ ಅವರನ್ನು ಸೋಲಿಸಲು ಸಾಧ್ಯವಾಗುವುದಿಲ್ಲ’ ಎಂದರು.

ಮುಖ್ಯಮಂತ್ರಿ ಬದಲಾವಣೆ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನಮ್ಮ ಪಕ್ಷದ ಬಗ್ಗೆ ನಮಗಿಂತ ಅವರಿಗೇ ಹೆಚ್ಚಿನ ವಿಷಯ ಗೊತ್ತಾಗುತ್ತಿದೆ ಎನಿಸುತ್ತಿದೆ. ಬಹುಶಃ ಅವರು ನಮ್ಮ ಕೇಂದ್ರದ ನಾಯಕರ ಸಂಪರ್ಕ ಸಾಧಿಸಿರುವ ಅನುಮಾನವಿದೆ. ಕಾಂಗ್ರೆಸ್‌ನಲ್ಲಿ ತಮಗೆ ಉಳಿಗಾಲವಿಲ್ಲವೆಂದು ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿರುವ ಗುಮಾನಿ ಇದೆ. ಆದರೆ, ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಶಿರಾ ಹಾಗೂ ಆರ್‌.ಆರ್‌.ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವಿಗೆ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಹಾಗೂ ಬಿಜೆಪಿ ಪ್ರಯತ್ನ ಕಾರಣ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.