
ಮೈಸೂರು: ನಜರ್ಬಾದ್ನ ಅಂಚೆ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಮುಕ್ತಾಯವಾದ 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾವೇಶದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾರಮ್ಯ ಸಾಧಿಸಿದ ಕೇರಳ ತಂಡವು ಚಾಂಪಿಯನ್ ಆಯಿತು. ಕರ್ನಾಟಕ ತಂಡದವರು ರನ್ನರ್ಅಪ್ ಟ್ರೋಫಿಗೆ ಭಾಜನರಾದರು.
ದೇಶದ 21 ವಲಯಗಳ 293 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಕೇರಳ ತಂಡದವರು 17 ಪ್ರಥಮ, 4 ದ್ವಿತೀಯ ಮತ್ತು 4 ತೃತೀಯ ಸ್ಥಾನದೊಂದಿಗೆ 108 ಅಂಕ ಪಡೆದು ಅಗ್ರಸ್ಥಾನ ಪಡೆದರೆ, ಆತಿಥೇಯ ತಂಡದವರು 16 ಪ್ರಥಮ, 14 ದ್ವಿತೀಯ, 4 ತೃತೀಯ ಬಹುಮಾನದೊಂದಿಗೆ 105 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದರು. ಕ್ರಮವಾಗಿ 22 ಹಾಗೂ 34 ಬಹುಮಾನ ಗಳಿಸಿದರು.
ಒಡಿಶಾ ತಂಡದವರು 38 ಅಂಕಗಳೊಂದಿಗೆ ಒಟ್ಟು 11 ಬಹುಮಾನಗಳನ್ನು ಗೆದ್ದು ತೃತೀಯ ಸ್ಥಾನವನ್ನು ಪಡೆದರು. ರಾಜ್ಯ ತಂಡದ ಎಸ್.ಚಾರ್ಮಿ 4 ಬಹುಮಾನ ಪಡೆದರೆ, ಅಭಿಮನ್ಯು, ಕೆ.ಆರ್.ಪ್ರಥಮ್, ಡಿ.ಎಂ.ಪುಣ್ಯಶ್ರೀ, ಶಾಂಭವಿ ದೆಗಾವಿಮಠ, ಜಿ.ಎಸ್.ಸೃಷ್ಟಿ ತಲಾ 3 ಬಹುಮಾನ ಪಡೆದರು. ಕೇರಳದ ಎಸ್.ದುರ್ಗಾರಾಮ್, ವಿ.ಆರ್.ಶ್ರೀಹರಿ, ತೀರ್ಥಪ್ರಕಾಶ್ ಅವರೂ ತಲಾ ಮೂರು ಬಹುಮಾನ ಪಡೆದು ಗಮನ ಸೆಳೆದರು.
ವಿಜೇತರಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಿದ ಹಿಂದೂಸ್ಥಾನಿ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್, ‘ಜೀವನದಲ್ಲಿ ವೃತ್ತಿ ಮತ್ತು ಪ್ರವೃತ್ತಿಗಳೆರಡೂ ಮುಖ್ಯ’ ಎಂದು ಸಲಹೆ ನೀಡಿದರು.
ರಾಜ್ಯ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ್, ಸ್ಥಾನಿಕ ನಿರ್ದೇಶಕ ಸಂದೇಶ್ ಮಹದೇವಪ್ಪ, ವಿವಿಧ ವಲಯಗಳ ನಿರ್ದೇಶಕರಾದ ವಿ.ತಾರಾ, ಹರ್ಷ, ಆಶಿಶ್ ಸಿಂಗ್ ಠಾಕೂರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.