
ಮೈಸೂರು: ದೇಶದ ಕೃಷಿ ವಲಯ ಎದುರಿಸುತ್ತಿರುವ ಸವಾಲುಗಳು– ಬಿಕ್ಕಟ್ಟುಗಳು, ರೈತರು ಅನುಭವಿಸುತ್ತಿರುವ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳುವ ಆಶಯದೊಂದಿಗೆ ಇಲ್ಲಿ ಶುಕ್ರವಾರದಿಂದ (ಫೆ.27) ಮೂರು ದಿನಗಳವರೆಗೆ ಆಯೋಜಿಸಿರುವ ‘6ನೇ ಕಿಸಾನ್ ಸ್ವರಾಜ್ ಸಮ್ಮೇಳನ’ಕ್ಕೆ ವೇದಿಕೆಯು ಸಜ್ಜಾಗಿದೆ. ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದದಿಂದ ಉಂಟಾಗಲಿರುವ ಸಂಕಷ್ಟಗಳ ಕುರಿತು ಸಮಾಲೋಚನೆಯೂ ನಡೆಯಲಿದೆ.
ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಗರಿಗೆದರಲಿರುವ ಸಮ್ಮೇಳನದಲ್ಲಿ ದೇಶದ ವಿವಿಧ 11 ರಾಜ್ಯಗಳ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಕೃಷಿಯಲ್ಲಿ ಉತ್ತಮ ಅಭ್ಯಾಸಗಳ ಕುರಿತು ವಿಚಾರ ವಿನಿಮಯಕ್ಕೂ ಸಮ್ಮೇಳನ ಸಾಕ್ಷಿಯಾಗಲಿದೆ.
‘ಸಾವಯವ ಕೃಷಿಕರ ಕುಂಭಮೇಳ’ ಎಂಬ ಖ್ಯಾತಿಯ ಈ ಸಮ್ಮೇಳನವನ್ನು ‘ಸುಸ್ಥಿರ ಮತ್ತು ಕೃಷಿ ಮೈತ್ರಿಕೂಟ (ಆಶಾ)–ಕಿಸಾನ್ ಸ್ವರಾಜ್ ಹಾಗೂ ಕೆಎಸ್ಒಯು ಪ್ರಸಾರಾಂಗದ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಕನ್ನಡ, ತಮಿಳು, ತೆಲುಗಿನಲ್ಲಿ ಅಧಿವೇಶನ ಜರುಗಲಿದೆ. ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.